ಮೈಸೂರು : 9 ವರ್ಷಗಳ ಹಿಂದೆ ಮದುವೆಯಾಗಿದ್ದ ಪತ್ನಿಯನ್ನು ತೊರೆದು, ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವತಿಯ ಜತೆ ಹೋಗಿದ್ದ ರೌಡಿಯನ್ನು ಅವರ ತೋಟದ ಮನೆಯಲ್ಲೇ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಜಯಪುರ ಹೋಬಳಿಯ ಅನುಗನಹಳ್ಳಿಯಲ್ಲಿ ನಡೆದಿದೆ.
ದೊರೆಸ್ವಾಮಿ ಅಲಿಯಾಸ್ ಸೂರ್ಯ (30) ಕೊಲೆಯಾದವರು, ಎಂದು ಗುರುತಿಸಲಾಗಿದೆ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಈತ ರೌಡಿ ಪಟ್ಟಿ ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ರೌಡಿ ಯುವತಿಯ ಜತೆ ಸುತ್ತಾಟ ನಡೆಸಿದ್ದು, ಆಕೆಯ ಜತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಇದರಿಂದ ಈತನ ಪತ್ನಿ ದೀಪಿಕಾ, ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೋಗಿದ್ದರು. ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದ ಶ್ವೇತ ಸೂರ್ಯನ ಜತೆ ವಾಸಿಸಲು ಪ್ರಾರಂಭಿಸಿದ್ದರು. ಅಲ್ಲದೇ, ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡುವಂತೆ ಸೂರ್ಯನಿಗೆ ಪೀಡಿಸುತ್ತಿದ್ದಳು ಎಂದು ಪತ್ನಿ ದೀಪಿಕಾ ಆರೋಪಿಸಿದ್ದಾರೆ.
ಕಳೆದ ಮಾರ್ಚ್ 12 ರಂದು ಶ್ವೇತ ಅನುಗನಹಳ್ಳಿಯ ತೋಟದ ಮನೆಯಲ್ಲಿ ದೊರೆಸ್ವಾಮಿ ಅಲಿಯಾಸ್ ಸೂರ್ಯ ಜತೆ ಇರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಾ. 13ರಂದು ಬೆಳಗ್ಗೆ ತೋಟದ ಮನೆಯಲ್ಲಿ ಸೂರ್ಯ ದಾರುಣವಾಗಿ ಕೊಲೆಯಾಗಿರುವ ವಿಚಾರ ಗೊತ್ತಾಯಿತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ನಾನು ಹಾಗೂ ಮೃತನ ತಾಯಿ ಘಟನಾ ಸ್ಥಳಕ್ಕೆ ಬಂದೆವು. ಈ ಸಂಬಂಧ ಜಯಪುರ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.
ಕೊಲೆ ನಡೆದ ಸ್ಥಳಕ್ಕೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲಿಸಿ, ನಂತರ ಇದರ ತನಿಖೆಗಾಗಿ ಎರಡು ಪೊಲೀಸ್ ತಂಡಗಳನ್ನ ನೇಮಿಸಿದ್ದಾರೆ.
ಎಸ್ಪಿ ವಿಷ್ಣುವರ್ಧನ್ ಮಾತನಾಡಿ ‘ಕೊಲೆಯಾಗಿರುವ ದೊರೆಸ್ವಾಮಿ ಅಲಿಯಾಸ್ ಸೂರ್ಯ (30) ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರೌಡಿಶೀಟರ್ ಸಹ ಆಗಿದ್ದ. ಈತ ತನ್ನ ತೋಟದ ಮನೆಯಲ್ಲಿ ಗುರುವಾರ ಬೆಳಗ್ಗೆ ಭೀಕರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಮೃತ ದೇಹವನ್ನ ಮೈಸೂರಿನ ಶವಾಗಾರಕ್ಕೆ ರವಾನಿಸಿ, ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಿದ್ದೇವೆ. ಈ ಸಂಬಂಧ ಅವರ ಪತ್ನಿ ದೀಪಿಕಾ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇತ್ತೀಚಿಗೆ ಜಾಲತಾಣದಲ್ಲಿ ಪರಿಚಯವಾದ ಯುವತಿ ಜತೆಗಿನ ಸಂಬಂಧ ಹಾಗೂ ಇತರ ವಿಚಾರಗಳ ಬಗ್ಗೆ ಅವರು ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೆಲವರನ್ನು ಶುಕ್ರವಾರ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.