Tuesday, February 25, 2025
Menu

ದಿಲ್ಲಿ ಅಸೆಂಬ್ಲಿ: ಸದನದಿಂದ ಎಎಪಿ ಶಾಸಕರ ಅಮಾನತು

ದೆಹಲಿ ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಭಾಷಣದ ಸಮಯದಲ್ಲಿ ಘೋಷಣೆ ಕೂಗಿದ್ದಕ್ಕೆ ವಿರೋಧ ಪಕ್ಷದ ನಾಯಕರಾದ ಅತಿಶಿ, ಮಾಜಿ ಸಚಿವ ಗೋಪಾಲ್ ರೈ ಮತ್ತು ಇತರ ಒಂಬತ್ತು ಮಂದಿ ಎಎಪಿ ಶಾಸಕರನ್ನು ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ದಿನದ ಮಟ್ಟಿಗೆ ಅಮಾನತುಗೊಳಿಸಿದ್ದಾರೆ.

ಮುಖ್ಯಮಂತ್ರಿ ಕಚೇರಿಯಿಂದ ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಬಿಜೆಪಿ ಸಂವಿಧಾನ ರಚನೆಕಾರನಿಗೆ ಅಗೌರವ ತೋರಿದೆ ಎಂದು ಸದನ ಆರಂಭವಾಗುತ್ತಿದ್ದಂತೆ ಆತಿಶಿ ಆರೋಪಿಸಿದರು.

ಅಂಬೇಡ್ಕರ್ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಬಿಜೆಪಿ ನಿಜ ಬಣ್ಣ ತೋರಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಅತಿಶಿ ಆರೋಪಿಸಿದ್ದರು. ಅಮಾನತುಗೊಂಡ ಎಎಪಿ ಶಾಸಕರು ನಂತರ ವಿಧಾನಸಭೆ ಆವರಣದಲ್ಲಿ ಅಂಬೇಡ್ಕರ್ ಭಾವಚಿತ್ರಗಳೊಂದಿಗೆ ಪ್ರತಿಭಟನೆ ನಡೆಸಿದರು.

ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಮೂರು ದಿನಗಳ ದೆಹಲಿ ವಿಧಾನಸಭೆ ಅಧಿವೇಶನ ಸೋಮವಾರ ಆರಂಭವಾಯಿತು. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಬಿಜೆಪಿ ಮತ್ತು ವಿರೋಧ ಪಕ್ಷದ ಶಾಸಕರು ಸ್ಪೀಕರ್ ವಿಜೇಂದರ್ ಗುಪ್ತಾ ಮಾರ್ಗದರ್ಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಎರಡನೇ ದಿನ ಆಮ್ ಆದ್ಮಿ ಸರ್ಕಾರದ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಬಾಕಿ ಇರುವ 14 ಸಿಎಜಿ ವರದಿಗಳನ್ನು ಮಂಡಿಸಲು ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುವ ಮೊದಲು ಸಭೆಯ ಆರಂಭದಲ್ಲಿಯೇ ವಿರೋಧ ಪಕ್ಷಗಳು ಗದ್ದಲ ಸೃಷ್ಟಿಸಿವೆ. ಬಾಕಿ ಇರುವ ಲೆಕ್ಕಪರಿಶೋಧನೆಗಳು ರಾಜ್ಯ ಹಣಕಾಸು, ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ, ವಾಹನ ವಾಯು ಮಾಲಿನ್ಯ, ಮದ್ಯ ನಿಯಂತ್ರಣ ಮತ್ತು ದೆಹಲಿ ಸಾರಿಗೆ ನಿಗಮದ ಕಾರ್ಯನಿರ್ವಹಣೆ ಸೇರಿ ಹಲವು ವಿಷಯಗಳನ್ನು ಒಳಗೊಂಡಿವೆ. ಎಎಪಿ ಆಡಳಿತವು ಈ ಸಿಎಜಿ ವರದಿಗಳನ್ನು ತಡೆಹಿಡಿದಿತ್ತು ಎಂದು ಬಿಜೆಪಿ ಆರೋಪಿಸಿದೆ.

Related Posts

Leave a Reply

Your email address will not be published. Required fields are marked *