ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಜ್ಯೋತಿಷ್ಯ ಮತ್ತು ಚೌಡೇಶ್ವರಿ ದೇವಿಯ ಪೂಜೆ ಹೆಸರಿನಲ್ಲಿ ವಂಚಕನೊಬ್ಬ ಮಹಿಳೆಯಿಂದ ನಲ್ವತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದು, ಬಳಿಕ ತನಗೆ ಅಪಘಾತವಾಗಿರುವುದಾಗಿ ಎಐ ವೀಡಿಯೊ ಕಳಿಸಿ ನಂಬಿಸಿದರುವ ಘಟನೆ ಬಹಿರಂಗಗೊಂಡಿದೆ.
ಬ್ಯಾಟರಾಯನಪುರದ ನಿವಾಸಿಯಾಗಿರುವ 62 ವರ್ಷದ ಶಾಂತಮ್ಮ ವಂಚನೆಗೆ ಒಳಗಾದ ಮಹಿಳೆ. ವಿಕ್ಟೋರಿಯಾ ಆಸ್ಪತ್ರೆ ಫುಟ್ಪಾತ್ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್ಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಬಂದು ಹೋಗುತ್ತಿದ್ದ ಶಾಂತಮ್ಮ ಅವರ ಪರಿಚಯವಾಗಿತ್ತು. ಅವರ ಕೌಟುಂಬಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ತಿಳದುಕೊಂಡ ಆತ ಮನೆಗೆ ಬಂದು ಚೌಡೇಶ್ವರಿ ಪೂಜೆ ಮಾಡುವುದಾಗಿ ಹೇಳಿದ್ದ.
ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ದೋಷ ನಿವಾರಣೆಯಾಗುತ್ತದೆ ಎಂದು ನಂಬಿಸಿದ್ದ ವೆಂಕಟೇಶ್, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಬಂದು ಒಡವೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಒಂದು ವರ್ಷದಿಂದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ.
ಆಗಸ್ಟ್ 19 ರಂದು ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಶಾಂತಮ್ಮ ಕೇಳಿದಾಗ ಆತ, ತನಗೆ ಅಪಘಾತವಾಗಿದೆ ಎಂದು ಬೇರೊಬ್ಬರಿಂದ ಕರೆ ಮಾಡಿಸಿ ತಲೆಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಎಐ ವೀಡಿಯೊ ಕಳುಹಿಸಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ಶಾಂತಮ್ಮ ಮಕ್ಕಳಿಗೆ ವೀಡಿಯೊ ತೋರಿಸಿದಾಗ, ಅದು ಎಐ ಮೂಲಕ ಸೃಷ್ಟಿಸಿರುವುದು ಗೊತ್ತಾಗಿದೆ. ಮಕ್ಕಳು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


