ವೃದ್ಧ ಪತ್ನಿಗೆ ಗುಂಡು ಹಾರಿಸಿ ಕೊಂದು, ನಂತರ ಪತಿಯೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಪೇಟೆಯ ಕುಂಬಾರಗಡಿಗೆ ಗ್ರಾಮದಲ್ಲಿ ಸಂಭವಿಸಿದೆ.
ಕುಂಬಾರಗಡಿಗೆ ಗ್ರಾಮದ ಕೃಷಿಕರಾದ ಕೆ.ಟಿ.ಸುಬ್ಬಯ್ಯ(೭೭), ಬೋಜಮ್ಮ(೭೪) ಮೃತಪಟ್ಟವರು. ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿದ್ದು, ಪತ್ನಿಗೆ ತಲೆಯ ಭಾಗಕ್ಕೆ ಗುಂಡು ತಗುಲಿದೆ. ಬಳಿಕ ಸುಬ್ಬಯ್ಯ ಕೋಣೆಯಲ್ಲಿ ಎದೆ ಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದಾರೆ.
ಕುಟುಂಬಸ್ಥರು ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಮುಂಗೋಪಿಯಾಗಿದ್ದ ಸುಬ್ಬಯ್ಯ, ಪತ್ನಿಯೊಂದಿಗೆ ಅಗಾಗ ಜಗಳವಾಡಿ ಹೊಡೆಯುತ್ತಿದ್ದರು. ಅದೇ ರೀತಿ ಜಗಳ ನಡೆದು ಕೊಲೆ ಮಾಡಿರಬಹುದು ಎಂದು ಮಗ ದೊರೆಮಣಿ ಸೋಮವಾರಪೇಟೆ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಎಸ್.ಪಿ. ಬಿಂದುಮಣಿ, ಇನ್ಸ್ಪೆಕ್ಟರ್ ಮುದ್ದು ಮಹಾದೇವ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರಿದಿದೆ.


