ಯಾರು ಏನು ಬೇಕಾದರು ಮಾತನಾಡಿಕೊಳ್ಳಲಿ, ಚರ್ಚೆ ಮಾಡಲಿ, ಏನಾದರೂ ಬಿಡುಗಡೆ ಮಾಡಿಕೊಳ್ಳಲಿ. ಅವರನ್ನು ಯಾರು ತಡೆಯಲು ಆಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮಗಳು ಪೆನ್ ಡ್ರೈವ್ ವಿಚಾರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದಾಗ ಶಿವಕುಮಾರ್ ಈ ರೀತಿ ಪ್ರತಿಕ್ರಿಯೆ ನೀಡಿದರು.
ಎರಡು ವರ್ಷದಿಂದ ಪ್ರಜ್ವಲ್ ರೇವಣ್ಣ ಜೈಲಲ್ಲಿದ್ದಾನೆ. ಬಿಡದಿ, ಕೆಪಿಎಸ್ಸಿ, ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದದಲ್ಲಿ ಪೋನ್, ಪೆನ್ಡ್ರೈವ್ ಸಿಕ್ಕಿದೆ. ಹೊಸ ಕತೆ ಕಟ್ಟುತ್ತಿದ್ದಾರೆ. ಅಲ್ಲೋಲ ಕಲ್ಲೋಲ ಆಗುವ ವಿಷಯ ಸದ್ಯದಲ್ಲೇ ಬರಲಿದೆ, ಆ ಪೆನ್’ಡ್ರೈವ್ ನಲ್ಲಿ ಇರುವುದೇ ಡಿಕೆ ಶಿವಕುಮಾರ್ ಅವರ ಹೆಸರು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹೊಳೆನರಸೀಪುರ ಮಾವಿನಕೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ನನ್ನ ಮನೆ ಅಲುಗಾಡಿಸಿರುವುದು ಯಾರು ಎಂದು ನಿಮಗೆ ಗೊತ್ತಿದೆ. ಒಂದು ಸಾಕ್ಷಿ ರೆಡಿ ಮಾಡಲು ಸಾಕಾಗಿದೆ ಎಂದು ಯಾರು ಹೇಳಿದ್ದು, ದೇವೇಗೌಡರ ಕುಟುಂಬ ಮುಗಿಸುತ್ತೇವೆ ಎಂದು ಯಾರು ಹೇಳಿದ್ದು ಈ ಮುಖ್ಯಮಂತ್ರಿನೇ ತಾನೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಡದಿ, ಕೆಪಿಎಸ್ಸಿ, ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದದಲ್ಲಿ ಪೋನ್, ಪೆನ್ಡ್ರೈವ್ ಇದೆ, ಅದರಲ್ಲಿ ಅಶ್ಲೀಲ ಚಿತ್ರ ಇದೆ ಎಂಬ ವಿಚಾರ ಚರ್ಚೆ ಆಗುತ್ತಿದೆ. ಎರಡು ವರ್ಷ ಇಲ್ಲದ ಫೋನ್ ಈಗ ಸಿಕ್ಕಿದೆ ಎಂದು ಹೊಸದಾಗಿ ಕಥೆ ಶುರು ಮಾಡಿದ್ದಾರೆ. ಪ್ರತಿನಿತ್ಯ ಸೀರಿಸ್ ಬಿಡಿಸುತ್ತಿದ್ದಾರೆ, ಯಾಕೆ ಬಿಡುತ್ತಿದ್ದಾರೆ, ಹಿಂದೆ ಏಕೆ ಮಾಡಲಿಲ್ಲ, ಎರಡು ವರ್ಷದಿಂದ ಫೋನ್ ಇಲ್ವಾ ಅವನ ಹತ್ತಿರ, ಈಗ ಬಂತಾ, ಜೈಲಲ್ಲಿ ಇರುವವನಿಗೆ ಅಶ್ಲೀಲ ಚಿತ್ರ ಕೊಟ್ಟಿದ್ದು ಯಾರು, ಆ ಅಶ್ಲೀಲ ಚಿತ್ರ ಎಲ್ಲಿಂದ ಜೈಲೊಳಗೆ ಬಂತು, ಯಾಕೆ ಬಂತು, ಯಾರು ಕೊಟ್ಟವರು, ಸಪ್ಲೈ ಮಾಡುವವರು ಯಾರು, ನಾವು ಮಾಡಿಸಿದ್ವಾ ಎಂದು ಪ್ರಶ್ನಿಸಿದ್ದಾರೆ.
ಪ್ರಜ್ವಲ್ ಹೆಸರು ಹೇಳಿ ದೇವೇಗೌಡರ ಕುಟುಂಬದ ಧ್ವನಿ ಮುಚ್ಚಿಸುತ್ತೀರಾ, ನಿಮ್ಮ ಕೈಯಲ್ಲಿ ಆಗುತ್ತದಾ, ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ. ನಾವೇ ನಮ್ಮ ಎಂಪಿ ಮಾಡಿದ್ದೇವಲ್ಲ ಅವನೇ ಹೇಳಿದ್ದಾನೆ, ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ದೇವೇಗೌಡರ ಕುಟುಂಬವನ್ನು ಸರ್ವ ನಾಶ ಮಾಡುವುದೇ ಆದ್ಯತೆ ಎಂದು. ಶಿವಕುಮಾರ್ ಏನೇನು ತರ್ಸಿದ್ರಿ, ಎಲ್ಲಿಂದ ತರಿಸಿದ್ರಿ, 400 ರೇಪ್ ಇದೆಲ್ಲಾ ಕತೆ ತಂದ್ರಿ, ಯಾರಿಗೆ ನ್ಯಾಯ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆಲ್ಲ ಹೆದರಿಕೊಂಡು ಹೋಗಲ್ಲ. ಎಷ್ಟು ಕುಟುಂಬ ಹಾಳು ಮಾಡಿದ್ದೀರಿ, ಬೇಕಾದಷ್ಟು ಹೇಳಬಲ್ಲೆ ಎಂದು ಸವಾಲು ಹಾಕಿದ್ದಾರೆ. ನನ್ನ ತಾಯಿ ಬಗ್ಗೆ ಯಾವ್ಯಾವ ಪದಗಳನ್ನು ಉಪಯೋಗ ಮಾಡಿದ್ರು ಅಂತ ಗೊತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.


