ಚಿತ್ರದುರ್ಗದ ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನಟ ದರ್ಶನ್ ವಿರುದ್ಧ ‘ಮಾಧ್ಯಮ ವಿಚಾರಣೆ’ ಬಗ್ಗೆ ಕರ್ನಾಟಕ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಸೂಚನೆ ನೀಡಿದೆ.
ಮಾಧ್ಯಮಗಳು ನ್ಯಾಯಾಧೀಶರಾಗಲು, ತೀರ್ಪುಗಾರರಾಗಲು ಅಥವಾ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದ್ದು, ನ್ಯಾಯಯುತ ವಿಚಾರಣೆಯ ಹಕ್ಕಿಗೆ ಧಕ್ಕೆ ಉಂಟುಮಾಡುವ ಮಾಧ್ಯಮ ಪ್ರಸಾರಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕೆಂದು ಹೇಳಿದೆ.
ಪ್ರಸಾರ ಮಾಧ್ಯಮಗಳು ನ್ಯಾಯಾಲಯದ ಕಲಾಪಗಳನ್ನು ಪುನರ್ನಿರ್ಮಿಸುವ ಮಟ್ಟಿಗೆ ಹೋಗುವ ಆತಂಕಕಾರಿ ಪ್ರವೃತ್ತಿ ತೋರಿಸುತ್ತಿದೆ. ಮಾಧ್ಯಮಗಳು ಕೋರ್ಟ್ ಕಲಾಪಗಳನ್ನು ಮರು ಸೃಷ್ಟಿ ಮಾಡುತ್ತಿದ್ದು, ನ್ಯಾಯಾಧೀಶರ ಮುಖವನ್ನು ಮಾತ್ರ ಮರೆಮಾಡಲಾಗುತ್ತದೆ ಮತ್ತು ಆರೋಪಿಗಳು ಮತ್ತು ವಕೀಲರ ಮುಖಗಳನ್ನು ಪ್ರದರ್ಶಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳನ್ನು ಪ್ರತಿ ವಿಚಾರಣೆಯ ದಿನಾಂಕದಂದು ಪ್ರಸಾರ ಮಾಡಲಾಗುತ್ತದೆ, ಬಾಕಿ ಇರುವ ನ್ಯಾಯಾಂಗ ಕಲಾಪಗಳನ್ನು ಸಾರ್ವಜನಿಕ ಪ್ರದರ್ಶನದ ರೂಪವಾಗಿ ಪರಿವರ್ತಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಕಿಡಿ ಕಾರಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ತಡೆಯಾಜ್ಞೆ ಆದೇಶ ಮತ್ತು ಕಾರ್ಯಕ್ರಮ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೆಲವು ಮಾಧ್ಯಮ ಸಂಸ್ಥೆಗಳ ವಿರುದ್ಧ ನಟ ದರ್ಶನ್ ಮಾಧ್ಯಮ ವಿಚಾರಣೆ ಆರೋಪ ಹೊರಿಸಿ ದೂರು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಮಾಧ್ಯಮ ವಿಚಾರಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
ದೂರಿನ ಮೇಲೆ ಕ್ರಮ ಕೈಗೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಮಾಧ್ಯಮಗಳ ಈ ನಡೆಯು ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪ ಮತ್ತು ಅಸ್ತಿತ್ವದಲ್ಲಿರುವ ನ್ಯಾಯಾಂಗ ಆದೇಶಗಳ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಹೇಳಿದೆ.
ದೂರಿನ ಅನ್ವಯ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ನಿರ್ದೇಶನಗಳನ್ನು ಕೋರಿ ಜನವರಿ 16, 2026 ರಂದು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಇತ್ತೀಚೆಗೆ ಅಂಗೀಕರಿಸಿದ್ದರು. ಟಿವಿ ಚಾನೆಲ್ಗಳು ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮಾಧ್ಯಮ ಆಧಾರಿತ ತೀರ್ಪು ನೀಡುವಿಕೆ, ಊಹಾತ್ಮಕ ನಿರೂಪಣೆ, ಪರಿಶೀಲಿಸದ ಆರೋಪಗಳಲ್ಲಿ ತೊಡಗಿವೆ. ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಗ್ರಹಿಕೆಯನ್ನು ರೂಪಿಸುತ್ತಿವೆ ಮತ್ತು ಅರ್ಜಿದಾರರ ನ್ಯಾಯಯುತ ವಿಚಾರಣೆಯ ಹಕ್ಕನ್ನು ದುರ್ಬಲಗೊಳಿಸಿವೆ ಎಂದು ದರ್ಶನ್ ಆರೋಪಿಸಿದ್ದಾರೆ.
ತಡೆಯಾಜ್ಞೆಯ ಆದೇಶಗಳ ಹೊರತಾಗಿಯೂ ಅಂತಹ ವಿಷಯದ ನಿರಂತರ ಪ್ರಸಾರ ಮಾಡುವುದು ಮಾಧ್ಯಮಗಳಲ್ಲಿ ನ್ಯಾಯಾಂಗ ಅಧಿಕಾರದ ಕುರಿತು ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ. ನ್ಯಾಯಾಂಗದಲ್ಲಿ ಹಸ್ತಕ್ಷೇಪ ನ್ಯಾಯಾಲಯದ ತಿರಸ್ಕಾರಕ್ಕೆ ಸಮಾನವಾಗಿದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.


