ತಮಿಳುನಾಡಿನ ಮುಖ್ಯಮಂತ್ರಿಯಾಗಿ ಟಿವಿಕೆಯ ವಿಜಯ್ ಅಧಿಕಾರ ಸ್ವೀಕರಿಸಿದ ಬಳಿಕ ಅವರ ಆಪ್ತ ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಮಹತ್ವದ ಭವಿಷ್ಯ ನುಡಿದಿದ್ದಾರೆ. ವಿಜಯ್ ಅವರಿಗೆ ಭಾರತದ ಪ್ರಧಾನಮಂತ್ರಿಯಾಗುವ ಬಲವಾದ ಅವಕಾಶವಿದೆ. ವಿಜಯ್ ಅವರ ಜಾತಕವು ಪ್ರಧಾನಮಂತ್ರಿ ನರೇಂದ್ರ ಮೋದಿರ ಜಾತಕದ “ಫೋಟೋಕಾಪಿ” ಎಂದು ಹೇಳಿದ್ದಾರೆ.
ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಟಿವಿಕೆ ಗೆಲುವಿನ ಬಗ್ಗೆ ಅವರು ಹಲವು ಭವಿಷ್ಯವಾಣಿ ಹೇಳಿದ್ದರು. ಸುನಾಮಿ ವಿಜಯ ಎಂಬ ಪದ ಬಹಳ ಸದ್ದು ಮಾಡಿತ್ತು. ವಿಜಯ್ ಮುಖ್ಯಮಂತ್ರಿಯಾದ ನಂತರ ರಾಧನ್ ಪಂಡಿತ್ ಅವರಿಗೆ ಸರ್ಕಾರಿ ಹುದ್ದೆ ನೀಡಲಾಗಿತ್ತು. ವ್ಯಾಪಕ ವಿವಾದದ ಬಳಿಕ ಆ ನೇಮಕಾತಿಯನ್ನು ರದ್ದುಪಡಿಸಲಾಯಿತು.
ಈಗ ವೆಟ್ರಿವೇಲ್ ತಮಿಳು ಸುದ್ದಿ ವಾಹಿನಿ ತಂತಿ ಟಿವಿಯಲ್ಲಿ ಮತ್ತೊಂದು ಹೊಸ ಭವಿಷ್ಯವಾಣಿ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ವಿಜಯ್ “ಪ್ರಧಾನಮಂತ್ರಿಯಾಗಲು ವಿಧಿಯೇ ನಿರ್ಧರಿಸಿದೆ” ಎಂದೂ ಹೇಳಿದ್ದಾರೆ. ಮುಂದಿನ 30-40 ವರ್ಷಗಳ ಅವರಿಗೆ ಯಾವುದೇ ದೊಡ್ಡ ರಾಜಕೀಯ ಸ್ಪರ್ಧೆ ಎದುರಾಗುವುದಿಲ್ಲ ಮತ್ತು ಅವರು ಯಾವತ್ತೂ ಸೋಲನ್ನು ಕಾಣುವುದಿಲ್ಲ ಎಂದಿದ್ದಾರೆ.
ಈ ಸಂದರ್ಶನದವೀಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ವ್ಯಂಗ್ಯಭರಿತ ಕಾಮೆಂಟ್ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ವಿಜಯ್ ಅವರಿಗೆ ಶಾಂತಿಯಿಂದ ಆಡಳಿತ ನಡೆಸಲು ಬಿಡಿ. ಇಂತಹ ಹೇಳಿಕೆಗಳನ್ನು ನೀಡಿ ಅವರ ರಾಜಕೀಯ ಭವಿಷ್ಯ ಹಾಳು ಮಾಡಬೇಡಿ ಎಂದು ಟೀಕಿಸುತ್ತಿದ್ದಾರೆ.


