Menu

ದಕ್ಷಿಣ ಭಾರತದ ರಾಜ್ಯಗಳ ಹಕ್ಕುಗಳನ್ನು ಉಳಿಸುವ ಸವಾಲು ನಮ್ಮ ಮುಂದೆ: ಡಿಕೆ ಶಿವಕುಮಾರ್‌

ತಮಿಳು, ಕನ್ನಡ, ತೆಲುಗು, ಮಲೆಯಾಳಂ ಸೇರಿದಂತೆ ಅನೇಕ ವೈವಿದ್ಯತೆಯನ್ನು ದಕ್ಷಿಣ ಭಾರತ ಹೊಂದಿದೆ. ನಮ್ಮ ದಕ್ಷಿಣ ಭಾರತದ ರಾಜ್ಯಗಳ ಹಕ್ಕುಗಳನ್ನು ಉಳಿಸುವ ಸವಾಲು ನಮ್ಮ ಮುಂದೆ ಎದುರಾಗಿದೆ. ಇದಕ್ಕಾಗಿ ನೀವು ಡಿಎಂಕೆ, ಕಾಂಗ್ರೆಸ್‌, ಮಿತ್ರಪಕ್ಷಗಳಿಗೆ ಜನ ಆಶೀರ್ವಾದ ಮಾಡಬೇಕು” ಎಂದು ಹೇಳಿದರು.

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ. ಇದನ್ನು ಅರಿತೇ ಪನ್ನೀರ್‌ ಸೆಲ್ವಂ ಅವರು ಡಿಎಂಕೆ ಸೇರಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.  ತಮಿಳುನಾಡಿನ ಕೃಷ್ಣಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೆಲ್ಲಕುಮಾರ್ ಪರ  ಶಿವಕುಮಾರ್ ರೋಡ್ ಶೋ ನಡೆಸಿ, ಪ್ರಚಾರ ಭಾಷಣ ಮಾಡಿದರು.

“ಅಣ್ಣಾಮಲೈಗೆ ಬಿಜೆಪಿಯವರು ಟಿಕೆಟ್‌ ಕೊಡಲಿಲ್ಲ. ಇನ್ನು ಅಣ್ಣಾ ಡಿಎಂಕೆಯನ್ನು ಅವರು ಬಿಡುತ್ತಾರೆಯೇ? ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅವರನ್ನು ಬಲಿ ಪಡೆದು ಬಿಜೆಪಿಯವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ ಕಾಂಗ್ರೆಸ್‌. ಈ ದೇಶದ ಉಸಿರಿನಲ್ಲಿ ಕಾಂಗ್ರೆಸ್‌ ಪಕ್ಷವಿದೆ, ಅಭಿವೃದ್ದಿ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಕಾಂಗ್ರೆಸ್‌ ಪಕ್ಷ ತನ್ನ ತ್ಯಾಗ ಬಲಿದಾನದಿಂದ ಈ ದೇಶವನ್ನು ತಳಮಟ್ಟದಿಂದ ಕಟ್ಟಿದೆ” ಎಂದರು.

“ನಮ್ಮ ಪಾಲಿನ ತೆರಿಗೆ ಹಣವನ್ನು ಲೂಟಿ ಮಾಡಲಾಗುತ್ತಿದೆ. ಇದಕ್ಕೆ ನ್ಯಾಯ ಒದಗಿಸಬೇಕು. ಇಡೀ ದೇಶ ನಮ್ಮ ಕಡೆ ನೋಡುತ್ತಿದೆ. ನಾವು ನ್ಯಾಯ, ಸತ್ಯದ ಪರವಾಗಿದ್ದೇವೆ ಎಂದು ಇಡೀ ದೇಶಕ್ಕೆ ಸಂದೇಶ ನೀಡಬೇಕು. ತಮಿಳುನಾಡಿನ ಅಸ್ತಿತ್ವ, ಸ್ವಾತಂತ್ರ್ಯ, ಹಕ್ಕನ್ನು ಉಳಿಸಲು ಸ್ಟಾಲಿನ್‌ ಅವರು ಬಿಜೆಪಿ ಹಾಗೂ ಮೋದಿಯವರ ವಿರುದ್ಧ 20 ಮಿತ್ರ ಪಕ್ಷಗಳನ್ನು ಕಟ್ಟಿಕೊಂಡು ಹೋರಾಡುತ್ತಿದ್ದಾರೆ” ಎಂದರು.

ಸ್ಟಾಲಿನ್‌ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಡಿಎಂಕೆ ಮೈತ್ರಿಕೂಟ ಅಧಿಕಾರಕ್ಕೆ ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳೆಯರು ಎಲ್ಲರೂ ನಮ್ಮ ಬದುಕಿಗೆ ಶಕ್ತಿಯಾಗಿ ನಿಂತ ಡಿಎಂಕೆ, ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಮತ ಚಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರಲಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ವಿಶ್ವಾಸ ವ್ಯಕ್ತಪಡಿಸಿದರು.

“ತಮಿಳುನಾಡಿನಲ್ಲಿ ಅನೇಕ ಜನಕಲ್ಯಾಣ ಯೋಜನೆಗಳನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಅದರಂತೆ ನಾವು ಸಹ ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಕ್ರಾಂತಿ ಮಾಡಿದ್ದೇವೆ. ಮಹಿಳೆಯರಿಗೆ ಉಚಿತ ಬಸ್‌, ತಿಂಗಳಿಗೆ ಎರಡು ಸಾವಿರ, ಯುವಕರಿಗೆ ಪ್ರೋತ್ಸಾಹ ಧನ, ಉಚಿತ ವಿದ್ಯುತ್‌ ನೀಡುತ್ತಿದ್ದೇವೆ. 1.36 ಕೋಟಿ ಮಹಿಳೆಯರಿಗೆ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 2 ಸಾವಿರ ಹಣ ನೀಡಲಾಗುವುದು” ಎಂದು ತಿಳಿಸಿದರು.

ಕಾಂಗ್ರೆಸ್‌, ಡಿಎಂಕೆ ಪಕ್ಷ ಜನರ ಸ್ವಾಭಿಮಾನ ಉಳಿಸಲು ಬದ್ದವಾಗಿವೆ. ಅತಿ ಹೆಚ್ಚು ತೆರಿಗೆ ನೀಡುವ ನಮ್ಮನ್ನು ಕಡೆಗಣಿಸಲಾಗಿದೆ. ಲೋಕಸಭಾ ಕ್ಷೇತ್ರಗಳನ್ನು ಕಡಿಮೆ ಮಾಡುವ ಹುನ್ನಾರ ಮಾಡಲಾಗುತ್ತಿದೆ. ಈ ಸಂಚಿನ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಜನರೂ ಸಹ ಇದಕ್ಕೆ ಕೈ ಜೋಡಿಸಬೇಕು. ಹಿಂದೂ ಧರ್ಮದಲ್ಲಿ ಕೃಷ್ಣನಿಗೆ ಮಹತ್ವದ ಸ್ಥಾನವಿದೆ. ಕೃಷ್ಣ ಎಲ್ಲಾ ರಂಗದಲ್ಲೂ ಚಾಣಾಕ್ಷ. ಇಂತಹ ಕೃಷ್ಣನ ಹೆಸರನ್ನು ಹೊಂದಿರುವ ಕ್ಷೇತ್ರ ಕಾಂಗ್ರೆಸ್‌ ಪಕ್ಷದ ಪಾಲಿಗೆ ವರವಿದ್ದಂತೆ. ದೇವರು ಕೊಟ್ಟ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

ಪಕ್ಷದ ಹಿರಿಯ ಕಾರ್ಯಕರ್ತ ಚೆಲ್ಲಕುಮಾರ್‌ ಅವರು ಸಂಸದರಾಗಿ ನಿಮ್ಮ ಸೇವೆ ಮಾಡಿದ್ದವರು. ಈಗ ಶಾಸಕರಾಗಿ ನಿಮ್ಮ ಸೇವೆಗೆ ಅವಕಾಶ ಕೇಳುತ್ತಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್‌ ಅವರಿಗೆ ಈ ಸ್ಥಾನವನ್ನು ಚೆಲ್ಲಕುಮಾರ್‌ ಅವರು ಸ್ಪರ್ಧಿಸಲು ಅವಕಾಶ ನೀಡಿದ್ದಕ್ಕೆ ಕೋಟಿ ಕೋಟಿ ವಂದನೆಗಳನ್ನು ತಿಳಿಸುತ್ತೇನೆ. ಇಂತಹ ಅನುಭವಿ, ದಕ್ಷ ಅಭ್ಯರ್ಥಿ ಬೇರೆ ಯಾವುದೇ ಪಕ್ಷದಿಂದಲೂ ಸಿಗಲು ಸಾಧ್ಯವಿಲ್ಲ. ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಅವರು ನಿಮ್ಮ ಮಡಿಲಿಗೆ ಹಾಕಿದ್ದಾರೆ” ಎಂದು ಹೇಳಿದರು.

“ಕೆಲವರು ಸಿನಿಮಾ ಡೈಲಾಗ್ ಹೊಡೆದು ಎಂಜಿಆರ್ ರೀತಿ ಗೆಲ್ಲಬಹುದು ಎಂದು ಭಾವಿಸಿದ್ದಾರೆ. ಸಿನಿಮಾ ಡೈಲಾಗ್ ತೆರೆ ಮೇಲೆ ನೋಡಲು ಚೆಂದ. ವಾಸ್ತವದಲ್ಲಿ ಅವು ಕಾರ್ಯಗತವಾಗುವುದಿಲ್ಲ. ಜನರ ಬದುಕಿಗೆ ಬದಲಾವಣೆ ತರಲು ಜನಪರ ಕಾರ್ಯಕ್ರಮ ತರುವ ಸರ್ಕಾರ ಬರಬೇಕು” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *