ಕೌಟುಂಬಿಕ ಕಲಹದಿಂದ ಬೇಸತ್ತು ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಟೆಕ್ಕಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನು ಚಂದ್ರ ರೆಡ್ಡಿ ಹಾಗೂ ಸಾಜಿಯಾ ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಮೊದಲಿಗೆ ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ ಪತ್ನಿ ಅಪಾರ್ಟ್ಮೆಂಟ್ನ 17ನೇ ಫ್ಲೋರ್ನಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿ ನಡುವೆ ಅನೇಕ ಬಾರಿ ಕಲಹಗಳಾಗಿದೆ. ಇಬ್ಬರೂ ಮಾನಸಿಕ ಒತ್ತಡ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು.
ಸೋಮವಾರವೂ ಜಗಳ ಆಗಿದೆ. ಬಳಿಕ ಪತ್ನಿ ಇಲ್ಲದಿರುವಾಗ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಗೆ ಬಂದು ವಿಷಯ ತಿಳಿದ ಆಕೆ ಅಪಾರ್ಟ್ಮೆಂಟ್ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಪ್ರೀತಿಸಿ ಮದುವೆ, ಒಂದೇ ತಿಂಗಳಲ್ಲಿ ಪತಿ ಆತ್ಮಹತ್ಯೆ
ಪ್ರೀತಿಸಿ ಮದುವೆಯಾದ ಒಂದೇ ತಿಂಗಳಲ್ಲಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಸುದೀಪ್ ಶೆಟ್ಟಿ ಮೃತ ಉದ್ಯಮಿ. ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ನಿವಾಸಿ. ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ, ಮೇಕಪ್ ಆರ್ಟಿಸ್ಟ್ ಹಾಗೂ ನಾಟಕ ಕಲಾವಿದೆ ಸೌಮ್ಯ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗಿದ್ದರು.
ಜೋಡಿ ಕಳೆದ ಫೆಬ್ರವರಿಯಲ್ಲಿ ಜಿಲ್ಲೆಯ ಬೆಳ್ತಂಗಡಿಯಲ್ಲಿ ರಿಜಿಸ್ಟರ್ ಮದುವೆ ಆಗಿದ್ದು, ಉಡುಪಿಯ ಕಾರ್ಕಳದಲ್ಲಿರುವ ಸೌಮ್ಯ ಮನೆಯಲ್ಲಿ ಸುದೀಪ್ ಜೊತೆ ಕೆಲ ಸಮಯ ಕಳೆದಿದ್ದರು. ತನ್ನ ಮನೆಗೆ ಹೋಗಿ ಸುದೀಪ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಕಾರ್ಕಳದಲ್ಲಿ ತಾಯಿ ಜೊತೆ ಗಂಡ ಕಾರಲ್ಲಿ ಹೋಗುತ್ತಿರುವುದನ್ನು ನೋಡಿ ಪ್ರಶ್ನಿಸಿದ್ದಾಳೆ. ಬಳಿಕ ಸುದೀಪ್ ಕಾರ್ಕಳದಲ್ಲಿರುವ ಪತ್ನಿ ಮನೆಗೆ ಬಂದು ಮರುದಿನ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ. ಪತ್ನಿ ಸೌಮ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಆತ ವಿಷ ಸೇವನೆ ಮಾಡಿದ್ದು ಗೊತ್ತಾಗಿದೆ.
ಸುದೀಪ್ ತಂದೆ ಮಗನನ್ನು ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ದಾಖಲಿಸಿದ ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮಗನ ಸಾವಿಗೆ ಸೊಸೆ ಕಾರಣವೆಂದು ಮಾವ ದೂರು ದಾಖಲಿಸಿದ್ದಾರೆ. ಅತ್ತೆಗೆ ಮಗನ ಪ್ರೀತಿ ಇಷ್ಟವಿರಲಿಲ್ಲ. ಸಾಲದ ಚಿಂತೆಯೂ ಇತ್ತು. ಈ ಸಾವಿನ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿ ದೂರು ನೀಡಲು ಸೌಮ್ಯಾ ಮುಂದಾಗಿದ್ದಾರೆ.


