ಕಾಮಾಕ್ಯ ಶಕ್ತಿಪೀಠದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಪ್ರಧಾನಮಂತ್ರಿ ಆಗುತ್ತಾರೆಂದು ನಾಗಸಾಧು ಮಾಡಿರುವ ಆಶೀರ್ವಾದ ವೈರಲ್ ಆಗುತ್ತಿದೆ. ಚುನಾವಣೆಯ ಹೊಸ್ತಿಲಲ್ಲಿರುವ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ಕೆಲಸ ನಿರ್ವಹಿಸುವ ಮೊದಲು ಪ್ರಿಯಾಂಕ ಗಾಂಧಿ ಅವರು ಡಿಕೆ ಶಿವಕುಮಾರ್ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಕಾಮಾಕ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು.
ದೇವರ ಪೂಜೆಯ ನಂತರ ಹೊರಬಂದ ಪ್ರಿಯಾಂಕ ಗಾಂಧಿ ಸಾಧುವೊಬ್ಬರ ಜೊತೆ ಫೋಟೋ ತೆಗೆದುಕೊಂಡರು. ಆಗ ನಾಗಾಸಾಧು ಪ್ರಿಯಾಂಕ ಅವರ ತಲೆಮೇಲೆ ಕೈಯಿಟ್ಟು, ’ಹಮಾರಾ ಬೇಟಿ ಪ್ರಧಾನಮಂತ್ರಿ ಬನೇಗಾ’ (ನಮ್ಮ ಮಗಳು ಪ್ರಧಾನಮಂತ್ರಿ ಆಗುತ್ತಾಳೆ) ಎಂದು ಆಶೀರ್ವಾದ ಮಾಡಿದರು. ಈ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮುಂದಿನ ಅಸ್ಸಾಂ ವಿಧಾನಸಭೆಗೆ ಅಭ್ಯರ್ಥಿಗಳ ಆಯ್ಕೆಯ ಸಂಬಂಧ, ಕಾಂಗ್ರೆಸ್ ಸಂಸದೆ ಮತ್ತು ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷೆ ಪ್ರಿಯಾಂಕ ಗಾಂಧಿ ಗುವಹಾಟಿಗೆ ಬಂದಿಳಿದಿದ್ದರು. ಅಸ್ಸಾಂ ಚುನಾವಣೆ ವೀಕ್ಷಕರಲ್ಲಿ ಒಬ್ಬರಾದ ಡಿಕೆ ಶಿವಕುಮಾರ್ ಜೊತೆಗಿದ್ದರು.
ನಾಗಸಾಧು ಮಾಡಿದ ಈ ಆಶೀರ್ವಾದ, ಖುದ್ದು ಪ್ರಿಯಾಂಕ ಗಾಂಧಿಗೆ ಆಶ್ಚರ್ಯ ಉಂಟು ಮಾಡಿದೆ. ಸಾಧು ಭವಿಷ್ಯ ಕೇಳಿದ ಪ್ರಿಯಾಂಕ ಕಿರುನಗೆ ಬೀರಿದರು. ಪ್ರಿಯಾಂಕ ಪ್ರಧಾನಮಂತ್ರಿ ಆಗುತ್ತಾರೆ ಎಂಬ ಭವಿಷ್ಯವನ್ನು ಕೇಳಿಸಿಕೊಂಡ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಖುಷಿಯಿಂದ ಚಪ್ಪಾಳೆ ಹೊಡೆದರು. ಬಳಿಕ ಪ್ರಿಯಾಂಕ ಗುವಹಾಟಿಯ ಕಾಂಗ್ರೆಸ್ ಕಚೇರಿ ’ರಾಜೀವ್ ಭವನ’ಕ್ಕೆ ತೆರಳಿದರು. ತಾಯಿ ಕಾಮಾಕ್ಯಳ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ನನಗೆ ನೆಮ್ಮದಿ ನೀಡಿದೆ. ಅಸ್ಸಾಂ ಜನರ ಪ್ರೀತಿ ಮತ್ತು ಹಾರೈಕೆ ನಮ್ಮ ಮೇಲಿದೆ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.


