ಬೆಂಗಳೂರಿನ ಮಹದೇವಪುರದಲ್ಲಿ ರಸ್ತೆ ದುರಸ್ತಿ ಕಾಮಗಾರಿ ವಿಳಂಬದಿಂದ ಎರಡು ವರ್ಷದ ಮಗುವಿನ ಪ್ರಾಣ ಹೋಗಿದೆ. ಆರು ತಿಂಗಳಿಂದ ಈ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ.
ಹಿಂದಿನಿಂದ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಮಗುವಿನ ಮೇಲೆ ಕಾರು ಹರಿದ ಪರಿಣಾಮ ಮಗು ಸ್ಥಳದಲ್ಲೇ ಅಸು ನೀಗಿದೆ. ರೊಚ್ಚಿಗೆದ್ದ ಸ್ಥಳೀಯರು ಪ್ರತಿಭಟನೆ ನಡೆಸಿ, ಅರ್ಧಂಬರ್ಧ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಆಡುಗೋಡಿಯ ಬಾಷ್ ಕಂಪನಿಯ ರಸ್ತೆಯಲ್ಲಿ ಗುಂಡಿಗೆ ಮಹಿಳೆ ಪ್ರಾಣ ತೆರುವಂತಾಗಿದೆ. 49 ವರ್ಷದ ಅಮಲ ಮೃತ ಮಹಿಳೆ. ಗುಂಡಿಯಿಂದಾಗಿ ಆಯ ತಪ್ಪಿ ಕೆಳಗೆ ಬಿದ್ದ ಅಮಲಾ ಮೇಲೆ ಹಿಂದಿನಿಂದ ಬಂದ ಟಿಪ್ಪರ್ ಚಲಿಸಿ ದುರಂತ ಸಂಭವಿಸಿದೆ.
ಶಿವಮೊಗ್ಗದ ಎಲ್ಬಿಎಸ್ ನಗರದ ಫ್ಲೈ ಓವರ್ನಲ್ಲಿ ಪಾಲಿಕೆ ನಿರ್ಮಿಸಿದ್ದ ಅವೈಜ್ಞಾನಿಕ ಹಂಪ್ನಿಂದ ಯುವಕ ಮೃತಪಟ್ಟಿದ್ದಾನೆ. ಹಂಪ್ ಕಾಣದೆ ಬೈಕ್ ಬಿದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಿದ್ದ ಯುವಕ ಉಲ್ಲಾ ಗಾಯಗೊಂಡಿದ್ದು, ಆಸ್ಪತ್ರಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ರಸ್ತೆ ದುರಸ್ತಿ ವಿಳಂಬ, ಅವೈಜ್ಞಾನಿಕ ಹಂಪ್, ಗುಂಡಿಯಿಂದಾಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.


