ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಬಸರಿಕಟ್ಟೆ ಸಮೀಪದ ಹೊನ್ನಗುಂಡಿ ಗ್ರಾಮದಲ್ಲಿ ಟಿವಿ ನೋಡೋದನ್ನು ಕಮ್ಮಿ ಮಾಡು ಎಂದು ಪೋಷಕರು ಹೇಳಿದ್ದಕ್ಕೆ ಮನನೊಂದು 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೇಲ್ನಿಂದ ನೇಣು ಬಿಗಿದುಕೊಂಡು ಸುಪ್ರಿತಾ ಎಂಬ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗುರುತಿಸಲಾಗಿದೆ.
ಬಾಲಕಿ ಊಟ ಮಾಡುವಾಗ ಟಿವಿ ನೋಡುತ್ತಿದ್ದಳು. ಈ ವೇಳೆ ಕೈಯಿಂದ ಊಟದ ತಟ್ಟೆ ಜಾರಿ ಬಿದ್ದಿದೆ. ಕೋಪಗೊಂಡ ತಾಯಿ ಊಟ ಮಾಡುವಾಗಲೂ ಟಿವಿ ನೋಡ್ತೀಯಾ, ಟಿವಿ ನೋಡೋದನ್ನು ಕಡಿಮೆ ಮಾಡು ಎಂದು ಬುದ್ಧಿ ಹೇಳಿದ್ದಾರೆ. ಇದರಿಂದ ನೊಂದ ಬಾಲಕಿ ಮನೆಯಲ್ಲಿ ಯಾರು ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರು ಕೆಲಸಕ್ಕೆ ತೆರಳಿ ವಾಪಸ್ ಮನೆಗೆ ಬಂದಾಗ ಮಗಳ ಮೃತದೇಹ ನೋಡಿ ಆಘಾತಗೊಂಡಿದ್ದಾರೆ.
ಇತ್ತೀಚೆಗೆ ಮಕ್ಕಳು ಸಣ್ಣಪುಟ್ಟ ಘಟನೆಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೆಚ್ಚುತ್ತಿದೆ, ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ, ಕಡಿಮೆ ಅಂಕ ಬಂದರೆ ಆತ್ಮಹತ್ಯೆ, ಮೊಬೈಲ್ ಕೊಡಿಸದಿದ್ದರೆ, ಮೊಬೈಲ್ ನೋಡುವುದು ಕಡಿಮೆ ಮಾಡಿ ಎಂದರೆ ಮಕ್ಕಳು ಆತ್ಮಹತ್ಯೆ ಮಾಡಿಕೊಲ್ಳುತ್ತಿರುವುದು ತೀವ್ರ ಕಳವಳಕಾರಿ ಬೆಳವಣಿಗೆ. ಕೇಳಿದ ವಾಹನ ಕೊಡಿಸಿಲ್ಲವೆಂದು ಆತ್ಮಹತ್ಯೆ ಮಾಡುವ ಪ್ರವೃತ್ತಿಯೂ ಮಕ್ಕಳಲ್ಲಿ ಕಾಣುತ್ತಿದೆ. ಮಕ್ಕಳಿಗೆ ಪೋಷಕರು ಯಾವುದೇ ಬುದ್ಧಿಮಾತು ಹೇಳುವ ಧೈರ್ಯ ಮಾಡದ ಪರಿಸ್ಥತಿ ನಿರ್ಮಾಣಗೊಂಡಿದೆ.
ನದಿಯಲ್ಲಿ ಮುಳುಗಿ ಯುವಕರ ಸಾವು
ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದಲ್ಲಿ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮಡಿಕೇರಿ ಮೂಲಕದ ಯೋಗೇಶ್ (17), ಅಭಿಷೇಕ್ (23) ಈಜಲು ಹೋಗಿ ಮೃತಪಟ್ಟವರು. ಯೋಗೇಶ್, ಅಭಿಷೇಕ್ ಮಡಿಕೇರಿಯಿಂದ ಬಾಳೆಹೊಳೆಯ ಕಾಫು ಎಸ್ಟೇಟ್ನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಭದ್ರಾನದಿಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.


