ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಆರು ದಿನಗಳ ಹಿಂದೆ ಬೆಂಗಳೂರಿನ ವಿದ್ಯಾರ್ಥಿ ಸಾಕೇತ್ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟದ ಬಳಿಕ ಶವ ಸಿಕ್ಕಿರುವ ಹಿನ್ನೆಲೆ ಪೋಷಕರು ಆ ದೇಶಕ್ಕೆ ತೆರಳಲು ತುರ್ತು ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕದ ವಿದ್ಯಾರ್ಥಿ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಮದ್ರಾಸ್ ಐಐಟಿಯಲ್ಲಿ ಪದವಿ ಪಡೆದಿದ್ದ. ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಆನ್ವಿಕ ಎಂಜಿನಿಯರಿಂಗ್ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಆಗಿದ್ದ. ಕಳೆದ ಸೋಮವಾರದಿಂದ ಸಾಕೇತ್ ನಾಪತ್ತೆಯಾಗಿದ್ದ. ಆರು ದಿನದ ನಂತರ ಸಾಕೇತ್ ಮೃತದೇಹ ಪತ್ತೆಯಾಗಿರುವ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.
ಸಾಕೇತ್ ಕಣ್ಮರೆಯಾದ ನಂತರ ಟಿಲ್ಡೆನ್ ಪ್ರಾದೇಶಿಕ ಉದ್ಯಾನವನದ ಬಳಿ ಇರುವ ಮನೆ ಪಕ್ಕ ಪಾಸ್ಪೋರ್ಟ್ ಮತ್ತು ಲ್ಯಾಪ್ಟಾಪ್ ಹೊಂದಿದ್ದ ಬ್ಯಾಗ್ ಪತ್ತೆಯಾಗಿತ್ತು. ಸುತ್ತಮುತ್ತಲ ಪ್ರದೇಶ ಗಳಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.
ಅಮೆರಿಕಗೆ ತೆರಳಲು ಸಾಕೇತ್ ಕುಟುಂಬಸ್ಥರು ತುರ್ತು ವೀಸಾಗೆ ಅಪ್ಲೈ ಮಾಡಿದ್ದು, ಕ್ಯಾಲಿಫೋರ್ನಿಯಾಗೆ ತೆರಳಿ ಮಗನ ಗುರುತು ಪತ್ತೆ ಹಚ್ಚಬೇಕು, ಮಗನ ಗುರುತು ಪತ್ತೆ ಹಚ್ಚುವವರೆಗೂ ನಾವು ಮಗನ ಸಾವನ್ನು ನಂಬುವುದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ನಾಗರಬಾವಿಯಲ್ಲಿ ಸಾಕೇತ್ ಮನೆಯಿದ್ದು, ತಂದೆ-ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಾರೆ.


