ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನವು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನವನ್ನು ಇದೇ 25ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಸಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಮಡಾ.ಸಿ.ಎನ್. ಅಶ್ವತ್ಥನಾರಾಯಣ್ ತಿಳಿಸಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯÀಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಸುಶಾಸನ ದಿನವಾಗಿ ಇಡೀ ಭಾರತದಲ್ಲಿ ಆಚರಿಸಲಾಗುತ್ತಿದೆ. ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನವು ಅಟಲ್ ಜೀ ಅವರ ಗೌರವಾರ್ಥವಾಗಿ ಪ್ರತಿ ವರ್ಷ ಸುಶಾಸನ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದರು. ‘ಶಿಕ್ಷಣದಲ್ಲಿ ಸುಶಾಸನ’ ಎಂಬ ಕಾರ್ಯಕ್ರಮವನ್ನು ನಗರದ ಕೇಂದ್ರ ಭಾಗದ ಜ್ಞಾನಜ್ಯೋತಿಯಲ್ಲಿ ಆಯೋಜಿಸಲಾಗುತ್ತದೆ. ಅಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 7ರವರೆಗೆ ಇದು ನಡೆಯಲಿದೆ ಎಂದರು.
ಇದನ್ನು ಎರಡು ಭಾಗವಾಗಿ ಮಾಡಿದ್ದು, ಒಂದು ಭಾಗದಲ್ಲಿ ಸಂವಾದ ನಡೆಸಲಾಗುವುದು. ಪಬ್ಲಿಕ್ ಯುನಿವರ್ಸಿಟಿ, ಪಠ್ಯಕ್ರಮ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತಂತೆ ಸಂವಾದ ನಡೆಸಲಾಗುತ್ತದೆ. ಶಿಕ್ಷಣ- ತಂತ್ರಜ್ಞಾನ ಕ್ಷೇತ್ರದ 15 ಜನ ತಜ್ಞರು ಭಾಗವಹಿಸುತ್ತಾರೆ ಎಂದು ತಿಳಿಸಿದರು. ಸದ್ಗುರು ಮಧುಸೂದನ ಸಾಯಿ ಸ್ವಾಮಿಗಳು ಉದ್ಘಾಟಿಸುವರು ಎಂದರು.
ಸಂಜೆ ಎರಡನೇ ಭಾಗದಲ್ಲಿ ಅಟಲ್ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಉದ್ಘಾಟಿಸುತ್ತಾರೆ. ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಸಂಸ್ಥೆಯ ಅಧ್ಯಕ್ಷ ಪ್ರೊ. ಕೃಷ್ಣೇಗೌಡರು ಭಾಗವಹಿಸುತ್ತಾರೆ. ಆನ್ಲೈನ್ ನೋಂದಣಿಗೆ ಅವಕಾಶವಿದೆ ಎಂದು ತಿಳಿಸಿದರು.
ಈ ಬಾರಿ ಪ್ರಶಸ್ತಿಯನ್ನು ಸಾಧಕರಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ನಿರ್ದೇಶಕ ಡಾ.ಗೋವಿಂದ ರಂಗರಾಜನ್, ಲಯನ್ಸ್ ಆಸ್ಪತ್ರೆ ಸಂಸ್ಥಾಪಕ, ನೇತ್ರ ತಜ್ಞ ಡಾ.ಚಂದ್ರಶೇಖರ ಶೆಟ್ಟಿ, ಬೇಸ್ ಸಂಸ್ಥೆಯ ಸಂಸ್ಥಾಪಕ, ಪ್ರಯೋಗ ವಿಜ್ಞಾನ ಕೇಂದ್ರದ ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಭಾರತ ಸದೃಢವಾಗಿ ಬೆಳೆಯಲು, ಸಬಲೀಕರಣ ಕಾಣಲು, ವಿಶ್ವದ ಜೊತೆ ಸ್ಪರ್ಧಿಸಲು, ಪ್ರತಿಯೊಬ್ಬರಿಗೂ ಸಮಾನತೆ ನೀಡಲು ಇಂಥ ಜಾಗೃತಿ ಕಾರ್ಯಕ್ರಮಗಳ ಅವಶ್ಯವಿದೆ ಎಂದು ನುಡಿದರು. ಗುಣಮಟ್ಟದ ಪರಿಪೂರ್ಣ ಶಿಕ್ಷಣ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ತಿಳಿಸಿದರು.


