ರಾಯಚೂರು ನಗರದ ರೇಡಿಯೋ ಸ್ಟೇಷನ್ ಸಮೀಪ ನಾಲ್ವರು ದುಷ್ಕರ್ಮಿಗಳ ಗುಂಪು ಬೀದಿಬದಿ ವ್ಯಾಪಾರಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದೆ. ಹತ್ಯೆಯಾದ ಯುವಕನನ್ನು ಆಂಧ್ರಪ್ರದೇಶ ಕಡಪದ ಇಮಾಮ್ ಹುಸೇನ್ (24) ಎಂದು ಗುರುತಿಸಲಾಗಿದೆ.
ಮೃತ ಇಮಾಮ್ ಹುಸೇನ್ 15 ದಿನಗಳಿಂದ ರಾಯಚೂರಿನ ಬೀದಿಬದಿಯಲ್ಲಿ ಡ್ರೈ ಫ್ರೂಟ್ಸ್ ಮಾರಾಟ ಮಾಡಿಕೊಂಡಿದ್ದನು. ತಡರಾತ್ರಿ ನಾಲ್ವರು ಇಬ್ಬರ ಮೇಲೆ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ.
ಇಮಾಮ್ ಹುಸೇನ್ನನ್ನು ಬರ್ಬರವಾಗಿ ಕೊಲೆ ಮಾಡಿದ ಬಳಿಕ ಆರೋಪಿಗಳು ರಸ್ತೆಯಲ್ಲಿ ಓಡುತ್ತಾ ಪರಾರಿಯಾಗಿದ್ದಾರೆ. ಪರಾರಿಯಾಗುತ್ತಿರುವ ದೃಶ್ಯವನ್ನು ಅದೇ ಮಾರ್ಗದಲ್ಲಿ ಸಾಗುತ್ತಿದ್ದ ವಾಹನ ಸವಾರರು ಮೊಬೈಲ್ನಲ್ಲಿ ವೀಡಿಯೊ ಮಾಡಿಕೊಂಡಿದ್ದು, ತನಿಖೆಯಲ್ಲಿ ಮಹತ್ವದ ಸುಳಿವು ನೀಡುವ ಸಾಧ್ಯತೆಯಿದೆ.
ಸದರ್ ಬಜಾರ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಎಂ. ಪುಟ್ಟಮಾದಯ್ಯ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.


