Wednesday, December 17, 2025
Menu

ಕೇಂದ್ರವೇ ಭರಿಸಬೇಕಿರುವ ನರೇಗಾ ವೆಚ್ಚ ಇನ್ಮುಂದೆ ರಾಜ್ಯ ಸರ್ಕಾರಕ್ಕೂ ಹೊರೆ, ಉದ್ಯೋಗ ಖಾತರಿಗೆ ಪ್ರಧಾನಿ ಕೊಕ್‌

ಕೇಂದ್ರ ಸರ್ಕಾರವೇ ಸಂಪೂರ್ಣ ವೆಚ್ಚವನ್ನು ಭರಿಸುವ ನರೇಗಾ ಯೋಜನೆಯ ಸ್ವರೂಪವನ್ನೇ ಬದಲಾಯಿಸಿರುವ ಎನ್ ಡಿ ಎ ಸರ್ಕಾರ, ಯೋಜನೆಯ ಶೇಕಡಾ 40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾಗಳ ತಲೆಗೆ ಕಟ್ಟಲಾಗುತ್ತಿದೆ. ನರೇಗಾವು ಉದ್ಯೋಗ ಖಾತರಿ ನೀಡುವ ನೈಜ ಯೋಜನೆಯಾಗಿತ್ತು,  ನರೇಂದ್ರ ಮೋದಿ ಸರ್ಕಾರದ ಆ ಖಾತರಿಯನ್ನು ಕಸಿಯಲಿದೆ ಮತ್ತು ಉದ್ಯೋಗದ ಭರವಸೆಯನ್ನು ರಾಜಕೀಯ ನಾಯಕರ ಇಚ್ಛೆಗೆ ಬಿಟ್ಟುಬಿಡುತ್ತದೆ. ಇದು ಜಾತಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆಯನ್ನು ಇನ್ನಷ್ಟು ಆಳವಾಗಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ-ನರೇಗಾ)ಯ ಹೆಸರು ಮತ್ತು ಸ್ವರೂಪವನ್ನು ಬದಲಾಯಿಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಬಡವರು ಮತ್ತು ಮಹಾತ್ಮ ಗಾಂಧೀಜಿ ಬಗೆಗಿನ ತಮ್ಮ ದ್ವೇಷವನ್ನು ತಾವೇ ಬಯಲು ಮಾಡಿಕೊಂಡಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ನರೇಗಾ ಯೋಜನೆ ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಮತ್ತು ಬಡತನ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗದ ಹಕ್ಕನ್ನು ಖಾತರಿಗೊಳಿಸಿದೆ ಎಂದಉ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವೇ ಸಂಪೂರ್ಣ ವೆಚ್ಚವನ್ನು ಭರಿಸುವ ನರೇಗಾ ಯೋಜನೆಯ ಸ್ವರೂಪವನ್ನೇ ಬದಲಾಯಿಸಿರುವ ಎನ್ ಡಿ ಎ ಸರ್ಕಾರ, ಯೋಜನೆಯ ಶೇಕಡಾ 40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾಗಳ ತಲೆಗೆ ಕಟ್ಟಿರುವುದು ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ದಿನದಿಂದ ಅನುಸರಿಸಿಕೊಂಡು ಬರುತ್ತಿರುವ ಒಕ್ಕೂಟ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ. ಈ ನಡೆಯಿಂದ ಬಡವರು ಕೆಲಸ ಹುಡುಕಿಕೊಂಡು ವಲಸೆ ಹೋಗುವುದು ಹೆಚ್ಚಾಗಲಿದೆ. ಏಕೆಂದರೆ ಪ್ರಸ್ತಾಪಿತ ರೂಪದಲ್ಲಿ ಸ್ವಂತ ಸ್ಥಳದಲ್ಲಿ ಉದ್ಯೋಗ ಖಾತರಿಯಿಲ್ಲ, ಜೀವನ ನಿರ್ವಹಣೆಗಾಗಿ ಕುಟುಂಬಗಳು ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಬೇಕಾಗಲಿದೆ ಎಂದು ವಿವರಿಸಿದ್ದಾರೆ.

ಗ್ರಾಮಸ್ವರಾಜ್ಯದ ಕನಸನ್ನು ಬಿತ್ತಿಹೋಗಿದ್ದ ಮಹಾತ್ಮ ಗಾಂಧೀಜಿಯವರ ಹೆಸರನ್ನು ಈ ಯೋಜನೆಗೆ ಇಟ್ಟಿರುವುದು ಅರ್ಥಪೂರ್ಣವಾದ ನಿರ್ಧಾರವಾಗಿತ್ತು. ವಿದೇಶದಲ್ಲಿ ಸುತ್ತಾಡುವಾಗ ಗಾಂಧಿ ಭಜನೆ ಮಾಡುವ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಮಾತ್ರ ಗಾಂಧೀಜಿ ಹೆಸರನ್ನು ಅಳಿಸಿಹಾಕುವ ಹುನ್ನಾರಗಳನ್ನು ನಡೆಸುತ್ತಲೇ ಇದ್ದಾರೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಮೆರೆಸಲು ಹೊರಟಿರುವ ಪರಿವಾರದಿಂದ ಇದಕ್ಕಿಂತ ಬೇರೆಯಾದುದನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಸಿಎಂ ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಅವರು ಯುಪಿಎ ಸರ್ಕಾರದಡಿ ಆರಂಭಗೊಂಡ ಪ್ರಮುಖ ಯೋಜನೆಗಳನ್ನು ಉಳಿಸುವ ಅಥವಾ ಬಲಪಡಿಸುವ ಬದಲು, ಕೇವಲ ಹೆಸರು ಬದಲಾಯಿಸುವುದಕ್ಕೆ ಸೀಮಿತವಾಗಿದೆ. ಈ ಸರ್ಕಾರಕ್ಕೆ “ಹೆಸರು ಬದಲಾಯಿಸುವ ಸಚಿವಾಲಯ”ವನ್ನು ಆರಂಭಿಸುವುದು ಸೂಕ್ತವಾಗಿರುತ್ತದೆ. ಪ್ರಧಾನಮಂತ್ರಿಯೇ ಆ ಸಚಿವಾಲಯದ ನೇತೃತ್ವವನ್ನು ವಹಿಸುವುದು ಇನ್ನಷ್ಟು ಅರ್ಥಪೂರ್ಣವಾಗಿರಲಿದೆ ಎಂದು ಟೀಕಿಸಿದ್ದಾರೆ.

ಹಿಂದಿನ ಸರ್ಕಾರಗಳಡಿ ಆರಂಭಗೊಂಡ 25ಕ್ಕೂ ಹೆಚ್ಚು ಪ್ರಮುಖ ಕಾರ್ಯಕ್ರಮಗಳನ್ನು ಈಗಿನ ಸರ್ಕಾರವು ಕೇವಲ ಹೆಸರು ಬದಲಾಯಿಸಿದೆ ಅಥವಾ ಮರುಪ್ಯಾಕೇಜ್ ಮಾಡಿದೆ. ನಿರ್ಮಲ ಭಾರತ್ ಅಭಿಯಾನವನ್ನು ಸ್ವಚ್ಛ ಭಾರತ್ ಮಿಷನ್ ಎಂದು ಮರುನಾಮಕರಣ ಮಾಡಲಾಯಿತು. ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ ಅಕೌಂಟ್ ಯೋಜನೆಯನ್ನು ಪ್ರಧಾನ ಮಂತ್ರಿ ಜನ್ ಧನ್ ಯೋಜನಾ ಎಂದು ಮರುಬ್ರಾಂಡ್ ಮಾಡಲಾಯಿತು. ಅದೇ ರೀತಿ ರಾಜೀವ್ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ ಸೇರಿಸಲಾಯಿತು. ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ (ಜೆಎನ್‌ಎನ್‌ಯುಆರ್‌ಎಂ) ಅನ್ನು ಅಟಲ್ ಮಿಷನ್ ಫಾರ್ ರಿಜುವಿನೇಷನ್ ಅಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಷನ್ (ಅಮ್ರುತ್) ಎಂದು ಪರಿವರ್ತಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಡವರ ಅನ್ನದ ಬಟ್ಟಲಿಗೆ ಕೈ ಹಾಕಿರುವ, ಬಾಪೂಜಿಗೆ ಅವಮಾನ ಮಾಡಿರುವ ಮತ್ತು ರಾಜ್ಯ ಸರ್ಕಾರಗಳ ಕತ್ತು ಹಿಸುಕಲು ಹೊರಟಿರುವ ನರೇಂದ್ರಮೋದಿ ಸರ್ಕಾರದ ಈ ಜನವಿರೋಧಿ ನಿರ್ಧಾರವನ್ನು ನಮ್ಮ ಪಕ್ಷ ಮತ್ತು ಸರ್ಕಾರ ಉಗ್ರವಾಗಿ ಖಂಡಿಸುತ್ತದೆ. ಇದರ ವಿರುದ್ದ ರಾಜ್ಯವ್ಯಾಪಿ ಹೋರಾಟವನ್ನು ನಡೆಸಲಿದೆ. ನರೇಗಾ ಯೋಜನೆಯನ್ನು ಮೂಲಸ್ವರೂಪದಲ್ಲಿಯೇ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಯೋಜನೆಯ ಲಕ್ಷಾಂತರ ಫಲಾನುಭವಿಗಳು ಕೂಡಾ ವಹಿಸಿಕೊಳ್ಳ ಬೇಕಾಗಿದೆ. ರಾಜ್ಯದ ಬಿಜೆಪಿ ನಾಯಕರನ್ನು ಹಿಡಿದು‌ನಿಲ್ಲಿಸಿ ಈ‌ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ದನಿ ಎತ್ತುವಂತೆ ಒತ್ತಡ ಹೇರಬೇಕು ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *