ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್ ಬೆಡ್ಶೀಟ್ಗಾಗಿ ಕೋರ್ಟ್ನಲ್ಲಿ ಬೇಡಿಕೆ ಇಟ್ಟಿದ್ದಾರೆ. ಚಳಿ ತಡೆಯಲಾಗುತ್ತಿಲ್ಲ, ಈ ಕಾರಣ ನಿದ್ದೆ ಬರುತ್ತಿಲ್ಲ, ಬೆಡ್ಶೀಟ್ ಕೊಡಿಸಿ ಎಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದಾರೆ.
ಪ್ರಕರಣದ ವಿಚಾರಣೆ ಸಂಬಂಧ ಪರಪ್ಪನ ಅಗ್ರಹಾರ ಜೈಲಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ದರ್ಶನ್, ಪವಿತ್ರ ಗೌಡ ಮತ್ತು ಇತರ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ಆರೋಪಿ ನಾಗರಾಜ್, ಬೆಡ್ಶೀಟ್ ಕೊಡಿಸುವಂತೆ ಮನವಿ ಮಾಡಿದರು. ‘ಸ್ವಾಮಿ ಬೆಡ್ಶೀಡ್ ಕೊಡಿಸಿ, ಇವರು ಕೊಡ್ತಿಲ್ಲ. ಮನೆಯಿಂದ ತಂದು ಕೊಟ್ರೆ ಅದನ್ನೂ ಕೊಡೋದಕ್ಕೆ ಬಿಡ್ತಿಲ್ಲ’ ಎಂದು ಅಳಲು ತೋಡಿಕೊಂಡರು.
ದರ್ಶನ್ ಮೈಕ್ ಹಿಡಿದು, ಸ್ವಾಮಿ ಇದು ನನ್ನೊಬ್ಬನ ಸಮಸ್ಯೆ ಅಲ್ಲ. ಎಲ್ಲರ ಸಮಸ್ಯೆ. ತುಂಬಾ ಚಳಿ ಇದೆ ಸರ್. ಚಳಿಗೆ ರಾತ್ರಿ ನಿದ್ದೆ ಬರ್ತಿಲ್ಲ. ನಿದ್ದೆ ಇಲ್ಲದೆ ರಾತ್ರಿಯೆಲ್ಲಾ ಎದ್ದು ಕೂರ್ತಿದ್ದೀವಿ. ಮೂಲೆಯಲ್ಲಿ ಕುಳಿತು ಕಾಲ ದೂಡ್ತಿದ್ದೀವಿ. ಎಲ್ಲರಿಗೂ ಪ್ರಾಬ್ಲಂ ಆಗಿದೆ ಸರ್. ಬೆಡ್ಶೀಟ್ ಕೊಡಿಸಿ ಎಂದು ಕೇಳಿದ್ದಾರೆ.
ಆರೋಪಿ ನಾಗರಾಜ್ ವಿಚಾರ ಪ್ರಸ್ತಾಪ ಮಾಡಿದಾಗಲೇ ಗರಂ ಆದ ಜಡ್ಜ್, ಜೈಲಾಧಿಕಾರಿ ಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಚಳಿ ಹೆಚ್ಚಾಗಿದೆ, ನೀವು ಬೆಡ್ಶೀಟ್ ಕೊಡೋದಕ್ಕೆ ಏನು ಸಮಸ್ಯೆ, ಅವರು ಹೇಗೆ ಮಲಗಬೇಕು, ಇದನ್ನೆಲ್ಲಾ ನಾವೇ ಹೇಳಬೇಕಾ ಎಂದು ಪ್ರಶ್ನಿಸಿದರು. ದರ್ಶನ್ ಮನವಿ ಬಳಿಕ ಜೈಲರ್ಗೆ ಆದೇಶ ಮಾಡಿದ ನ್ಯಾಯಾಧೀಶರು, ಕಾನೂನಿನಲ್ಲಿ ಅವಕಾಶ ಇರುವುದನ್ನು ಕೊಡಿ. ಹೊರಗೆ ಚಳಿ ಜಾಸ್ತಿಯಿದೆ, ಗೊತ್ತಾಗಲ್ವ ಎಂದು ತಾಕೀತು ಮಾಡಿದರು.
ದರ್ಶನ್ ಪವಿತ್ರ ಗೌಡ ಸೇರಿದಂತೆ 6 ಆರೋಪಿಗಳು ಜೈಲಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದರೆ, ಉಳಿದ ಆರೋಪಿಗಳು ಖುದ್ದು ಹಾಜರಾಗಿದ್ದರು. ಡಿ.3 ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.


