ಕನ್ಹೇರಿ ಮಠದ ಅದೃಶ್ಯ ಶ್ರೀ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ, ಬಾಗಲಕೋಟಿ ಹಾಗೂ ಧಾರವಾಡ ಜಿಲ್ಲೆಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಗದಗದಲ್ಲಿ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಯಿತು. ಚೆನ್ನಮ್ಮ ಸರ್ಕಲ್ ನಿಂದ ಆರಂಭವಾದ ಪಾದಯಾತ್ರೆ ಮುಳಗುಂದ ನಾಕಾ ಮಾರ್ಗವಾಗಿ ಡಿಸಿ ಕಛೇರಿ ತಲುಪಿ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಶಾಸಕ ಸಿಸಿ ಪಾಟೀಲ ಮಾತನಾಡಿ, ಕಾಡಸಿದ್ದೇಶ್ವರ ಶ್ರೀಗಳು ರೈತರಿಗೆ ಸಾವಯವ ಕೃಷಿಯಲ್ಲಿ ಯಾವ ರೀತಿ ಸುಧಾರಣೆ ತರಬೇಕು ಎನ್ನುವುದನ್ನು ಹೇಳಿ ಕೋಡುತ್ತಾರೆ. ಗರ್ಭಿಣಿಯರಿಗೆ ಸಂಸ್ಕಾರದ ಪಾಠ, ಯುವಕರಿಗೆ ಸಂಸ್ಕ್ರತಿಯ ನೀತಿ ಪಾಠಗಳನ್ನು ಹೇಳುತ್ತಾರೆ. ಸರ್ಕಾರ ಮಾಡದ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಅವರು ಹಿಂದೂತ್ವವಾದಿ ಎನ್ನುವ ಒಂದೇ ಒಂದು ಕಾರಣಕ್ಕೆ ಅವರಿಗೆ ನಿರ್ಬಂಧ ಹೇರಿದ್ದು ಸರಿಯಲ್ಲ. ಅವರಿಗೆ ನಿರ್ಬಂಧ ಹೇರಿರಬಹುದು. ಆದರೆ ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರ ಮೇಲೆ ನಿರ್ಬಂಧ ತೆರವುಗೊಳಿಸಿ ಮುಕ್ತ ವ್ಯವಸ್ಥೆ ಕಲ್ಪಿಸಬೇಕು. ದಬ್ಬಾಳಿಕೆಯಿಂದ ರಾಜ್ಯ ಆಳುವುದು ಸರಿಯಲ್ಲ. ಅಧಿಕಾರ ಶಾಶ್ವತವಲ್ಲ. ಮುಖ್ಯಮಂತ್ರಿಗಳೇ ಅವರ ಮಠಕ್ಕೆ ಒಮ್ಮೆ ಹೋಗಿ ನೋಡಿ. ಆಗ ನೀವು ಮಾಡುವುದು ತಪ್ಪು ಅಂತ ನಿಮಗೆ ಅನಿಸುತ್ತದೆ ಎಂದು ಹೇಳಿದರು.
ಶ್ರೀ ಪ್ರಶಾಂತ ಮಹಾರಾಜರು ಮಾತನಾಡಿ, ಸನಾತನ ಧರ್ಮದ ರಕ್ಷಣೆಯನ್ನು ಕಾಡಸಿದ್ದೇಶ್ವರ ಶ್ರೀಗಳು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ನಿರ್ಬಂಧ ಹೇರಲಾಗುತ್ತಿದೆ. ಸ್ವಾಮಿಜಿಗಳಿಗೆ ನಿರ್ಬಂಧ ಹೇರುವ ದುಷ್ಟ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಹಿಂದೆ ನಮ್ಮನ್ನು ಹಲವು ದಶಕಗಳ ಕಾಲ ಆಳಿದ ಮೊಘಲರು, ಡಚ್ಕರು, ಪೋರ್ಚಗಿಸರಿಗೆ ನಮ್ಮ ಧರ್ಮಕ್ಕೆ ಏನೂ ಮಾಡಲಾಗಲಿಲ್ಲ. ಕಾಂಗ್ರೆಸ್ ಸರ್ಕಾರ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
‘ಪಾಕಿಸ್ತಾನ ಜಿಂದಾಬಾದ್ ಅಂದವರಿಗೆ, ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡಿದವರಿಗೆ ನಿರ್ಬಂಧವಿಲ್ಲ. ಆದರೆ ಧರ್ಮ, ದೇಶ ರಕ್ಷಕರಿಗೆ ನಿರ್ಬಂಧ ಹೇರಿರುವುದು ಸರಿಯಲ್ಲ. ಹಿಂದೂತ್ವ ವಿರೋಧಿ ಧೋರಣೆ ಅನುಸರಿಸಿದರೆ ಬಿಹಾರದಲ್ಲಿ ಕಾಂಗ್ರೆಸ್ ಗೆ ಆದ ಪರಿಸ್ಥಿತಿ ರಾಜ್ಯದಲ್ಲಿಯೂ ಆಗಬಹುದು.’ ಎಂದರು.
ಪ್ರತಿಭಟನೆಯಲ್ಲಿ ವಿಜಯಪುರದ ಕೈವಲ್ಯಕುಟೀರ ಪ್ರಣವಪ್ರಕಾಶ ಮಹಾರಾಜರು, ಕನಕನಾಳದ ಗಿರೀಶಾನಂದ ಮಹಾರಾಜರು, ಹಂಸನೂರಿನ ಶ್ರೀ ಅಭಿನವ ಬಸವರಾಜೇಂದ್ರ ಸ್ವಾಮಿಜಿಗಳು, ಕನ್ನೂರಿನ ಗಿರಿಮಲ್ಲೇಶ್ವರ ಮಹಾರಾಜರು, ಕನ್ನೂರಿನ ಸದಾಶಿವ ಮಹಾರಾಜರು, ಸಿದ್ದಾಪೂರದ ಅರವಿಂದ ಮಹಾರಾಜರು, ಬಸವನಬಾಗೆವಾಡಿಯ ಅಭಿಯಾನಂದ ಮಹಾರಾಜರು, ಲಿಂಗದಾಳದ ಶ್ರೀ ಚೆನ್ನಮಲ್ಲಿಕಾರ್ಜುನ ಮಹಾರಾಜರು, ವಸಂತಗೌಡ ಪೊಲೀಸಪಾಟೀಲ, ಪ್ರದೀಪ ನವಲಗುಂದ, ರಾಜು ಕುರಡಗಿ, ಎಸ್. ವ್ಹಿ ಸಂಕನೂರ, ವಿಜಯಕುಮಾರ ಗಡ್ಡಿ, ಸುದೀರ ಖಾಟಗೇರ, ರವಿ ವಗ್ಗಣ್ಣನವರ, ಪ್ರಶಾಂತ್ ನಾಯ್ಕರ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.


