ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಮಗನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಶಿವಲಿಂಗಪ್ಪ (60) ಕೊಲೆಯಾದವ. ಮಗ ಶಂಕ್ರಪ್ಪ ಕೊಲೆ ಆರೋಪಿ.
ಶಿವಲಿಂಗಪ್ಪ ತನ್ನ ಪತ್ನಿಗೆ ನಿತ್ಯವೂ ಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದ. ಮಗ ಶಂಕ್ರಪ್ಪನ ಹೆಂಡತಿ ಸ್ನಾನ ಮಾಡುವ ವೇಳೆ ಕದ್ದುಮುಚ್ಚಿ ನೋಡುತ್ತಿದ್ದ. ಮಗ ಶಂಕ್ರಪ್ಪ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಚಾಳಿಯನ್ನು ಮುಂದುವರಿಸಿದ್ದ.
ಇದೇ ವಿಚಾರದಲ್ಲಿ ತಂದೆ ಮತ್ತು ಮಗನ ನಡುವೆ ಜಗಳ ನಡೆದಿದ್ದು, ಶಂಕ್ರಪ್ಪ ತಂದೆಯನ್ನು ತಳ್ಳಿದ್ದರಿಂದ ಒಳಕಲ್ಲು ಮೇಲೆ ಬಿದ್ದಿದ್ದಾನೆ. ಆಗ ಒನಕೆಯಿಂದ ತಲೆಗೆಹೊಡೆದಿದ್ದು, ಶಿವಲಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನ ಪತ್ನಿ ನೀಡಿದ ದೂರಿನ ಅನ್ವಯ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗ ಶಂಕ್ರಪ್ಪನನ್ನು ಕೊಲೆ ಆರೋಪದಡಿ ಮೇಲೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ವಿಕಾಸ್ ಪಿ. ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪತಿಯಿಂದ ಪತ್ನಿಯ ಕೊಲೆ
ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ವ್ಯಾಪ್ತಿಯ ಕೊಡಗರಹಳ್ಳಿ ಗ್ರಾಮದಲ್ಲಿ ಪಾನಮತ್ತನಾಗಿ ಕ್ಷುಲ್ಲಕ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಅಂದಗೋವೆ ಖಾಸಗಿ ಕಾಫಿ ತೋಟವೊಂದರ ಲೈನ್ ಮನೆಯಲ್ಲಿ ವಾಸವಿದ್ದ ಪತಿ ಮುತ್ತ ಮದ್ಯ ಸೇವಿಸಿ ಪತ್ನಿ ಲತಾ ಜೊತೆ ಜಗಳವಾಡಿ ಪತ್ನಿಯ ತಲೆಗೆ ದೊಣ್ಣೆಯಿಂದ ಹತ್ಯೆಗೈದಿದ್ದಾನೆ. ಲತಾಳ ಅಕ್ಕ ವಳ್ಳಿಯಮ್ಮ ಎಂಬಾಕೆ ದೂರು ನೀಡಿದ ಬಳಿಕ ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಡಿಷನಲ್ ಎಸ್ ಪಿ ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಸುಂಟಿಕೊಪ್ಪ ಮೋಹನ್ರಾಜ್ ಹಾಗೂ ಸಿಬ್ಬಂದಿ ಕಾನೂನು ಕ್ರಮ ಕೈಗೊಂಡಿದ್ದಾರೆ.


