ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದ್ದರೂ, ಸಭೆಗೆ ಗೈರಾಗುವ ಮೂಲಕ ಬಿಜೆಪಿಯವರು ಬೆಂಗಳೂರಿನ ಅಭಿವೃದ್ಧಿಯ ವಿರೋಧಿಗಳೆಂದು ನಿರೂಪಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜಿಬಿಎ ಸಭೆಗೆ ಬಿಜೆಪಿಯವರು ಗೈರಾಗಿದ್ದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಬಿಜೆಪಿಗರಿಗೆ ಬೆಂಗಳೂರಿನ ಬಗ್ಗೆ ಕಳಕಳಿಯಿದ್ದರೆ ಜಿಬಿಎ ಸಭೆಗೆ ಗೈರಾಗುತ್ತಿರಲಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂಬುದು ಪ್ರಜಾಪ್ರಭುತ್ವದ ವೇದಿಕೆಯಾಗಿದೆ. ಆಡಳಿತ ವಿಕೇಂದ್ರೀಕರಣಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ತಿಳಿಯುತ್ತದೆ. ಬೆಂಗಳೂರು ಬೃಹತ್ ಆಗಿ ಬೆಳೆದಿದ್ದು, ಇಲ್ಲಿನ ಜನರಿಗೆ ಉತ್ತಮ ಆಡಳಿತ, ಸೌಲಭ್ಯಗಳನ್ನು ನೀಡಲು ನಗರವನ್ನು ವಿಭಜಿಸಲೇಬೇಕೆಂಬ ನಿಲುವನ್ನು ಪ್ರಥಮವಾಗಿ ಬಿಜೆಪಿಯವರೇ ಹೊಂದಿದ್ದರು . ಆದರೆ ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯವರು ಪುನ: ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜಿಬಿಎ ಕೇಂದ್ರ ಕಚೇರಿಯ ಪೌರ ಸಭಾಂಗಣದಲ್ಲಿ ನಡೆಯಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ 75 ಸದಸ್ಯರಲ್ಲಿ 35 ಮಂದಿ ಹಾಜರಿದ್ದರು. ಬಿಜೆಪಿ ಶಾಸಕರು ಹಾಗೂ ಸಂಸದರು ಸಭೆಗೆ ಗೈರಾಗಿದ್ದು, ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಪ್ರತ್ಯೇಕ ಸಭೆ ನಡೆಸಿದರು.
ಅಜೆಂಡಾ ನೀಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಶೀವಕುಮಾರ್, ಎಲ್ಲರಿಗೂ ಸಭೆಗೆ ಬಂದ ನಂತರ ಅಜೆಂಡಾ ನೀಡುವುದಾಗಿ ಮೊದಲು ಹೇಳಿದ್ದೇವೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸಚಿವರು ಹಾಗೂ ನಾಯಕರಿಗೂ ಆಹ್ವಾನ ನೀಡಲಾಗಿತ್ತು. ಅವರು ಸಭೆ ಆರಂಭದ ವೇಳೆಗೆ ಬಂದಿರದಿದ್ದರೆ ಅವರ ಹೆಸರನ್ನು ತೆಗೆದು, ಹಿಂದಿನವರನ್ನು ಆಸನದಲ್ಲಿ ಕೂರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


