ಸತತ ಮಳೆಯಿಂದಾಗಿ ಮನೆ ಗೋಡೆ ಕುಸಿದು ಓರ್ವ ಬಾಲಕ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ರಾತ್ರಿಯಿಡೀ ಸುರಿದ ಮಳೆಯಿಂದ ಅಂಬೇಡ್ಕರ್ ವೃತ್ತದ ಬಳಿಯ ಮನೆ ಗೋಡೆ ಕುಸಿದ ಪರಿಣಾಮ ಮನೆಯಲ್ಲಿ ಮಲಗಿದ್ದ 11 ವರ್ಷದ ಬಾಲಕ ದರ್ಶನ್ ನಾಗಪ್ಪ ಲಾತೂರ ಮೃತಪಟ್ಟಿದ್ದಾನೆ. ಬಾಲಕನ ಸಹೋದರ ಶ್ರೀಶೈಲ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕನ ಕುಟುಂಬ ಪತ್ರಾಸ್ ಮನೆಯಲ್ಲಿ ವಾಸವಿತ್ತು. ಶನಿವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಇವರ ಬದಿಯ ಮನೆಯ ಗೋಡೆ ಕುಸಿದು ಪತ್ರಾಸ್ ಮೇಲೆ ಬಿದ್ದಿದೆ. ಪತ್ರಾಸ್ ಕೆಳಗೆ ಮಲಗಿದ್ದ ಬಾಲಕ ದರ್ಶನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಬಾಲಕನ ತಾಯಿ ರೂಪಾ, ಸಹೋದರಿ ಅದೃಷ್ಟವಶಾತ್ ಪಾರಾಗಿದ್ದಾರೆ. ಬಾಲಕನ ತಂದೆ ನಾಗಪ್ಪ ಕೆಲಸದ ಅಂಗವಾಗಿ ಹೊರಗೆ ಹೋಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪಿಎಸ್ಐ ಕಿರಣ ಸತ್ತಿಗೇರಿ ಭೇಟಿ ನೀಡಿ ಪರಿಶೀಲಿಸಿದರು.