Tuesday, September 23, 2025
Menu

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರ ಗೌಡ ಸೇರಿ 17 ಆರೋಪಿಗಳಿಗೆ ಸೆ.25 ಕ್ಕೆ ದೋಷಾರೋಪ ನಿಗದಿ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌, ಪವಿತ್ರ ಗೌಡ ಹಾಗೂ ಸಹಚರರ ಮೇಲೆ ಪೊಲೀಸರು ಹೊರಿಸಿರುವ ದೋಷಾರೋಪವನ್ನು ಸೆಷನ್ಸ್‌ ನ್ಯಾಯಾಲಯ ಸೆಪ್ಟೆಂಬರ್ 25ಕ್ಕೆ ನಿಗದಿಪಡಿಸಿದೆ.

ದರ್ಶನ್‌, ಪವಿತ್ರಾಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳು ಸೆಪ್ಟೆಂಬರ್ 25ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಇದೇ ದಿನ, ರೇಣುಕಾಸ್ವಾಮಿ ಪ್ರಕರಣದಲ್ಲಿ ಪೊಲೀಸರು ದಾಖಲಿಸಿರುವ ಅಪಹರಣ, ಕೊಲೆ, ಸುಲಿಗೆ, ಸಾಕ್ಷ್ಯ ನಾಶ ಹಾಗೂ ಇತರ ದೋಷಾರೋಪಗಳ ಕುರಿತು ವಿಚಾರಣೆ ನಡೆಯಲಿದೆ.

ಹಾಸಿಗೆ ದಿಂಬು ಆದೇಶ ಅಂದೇ ಪ್ರಕಟ

ಮತ್ತೊಂದೆಡೆ ನಟ ದರ್ಶನ್‌ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 25 ಕ್ಕೆ ನ್ಯಾಯಾಲಯ ಪ್ರಕಟಿಸಲಿದೆ.

ನ್ಯಾಯಾಲಯದ ನಿರ್ದೇಶನ ನೀಡಿದ್ದರೂ ತನಗೆ ಜೈಲಿನಲ್ಲಿ ಹಾಸಿಗೆ, ದಿಂಬಿನಂತಹ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿದ ನಟ ದರ್ಶನ್ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದರು. ಜೈಲಿನ ಮ್ಯಾನ್ಯುಯಲ್ ಪ್ರಕಾರ ಮೂಲ ಸೌಕರ್ಯ ನೀಡಿ ಎಂದು ಕಳೆದ ವಾರ ಕೋರ್ಟ್ ಆದೇಶ ಮಾಡಿತ್ತು. ಜೈಲಿನ ಅಧಿಕಾರಿಗಳು ದರ್ಶನ್‌ಗೆ ಜಮ್ಖಾನ, ದಿಂಬು ನೀಡಿ ವಾಕಿಂಗ್‌ಗೆ ಅವಕಾಶ ನೀಡಿದ್ದರು.

ದರ್ಶನ್ ಜೈಲಾಧಿಕಾರಿಗಳ ವಿರುದ್ಧ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಹೇಳಿದ್ದರೂ ಹಾಸಿಗೆ ಕೊಟ್ಟಿಲ್ಲ, ಜೈಲು ಸೇರಿ ತಿಂಗಳಾದರೂ ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿದ್ದಾರೆಂದು ದೂರಿದ್ದಾರೆ.

ಜೈಲಾಧಿಕಾರಿಗಳು ಕೋರ್ಟ್ ಆದೇಶವನ್ನು ಪಾಲಿಸದಿರುವುದರಿಂದ ತನಗೆ ಬಹಳಷ್ಟು ತೊಂದರೆ ಆಗಿದೆ. ಜೈಲಿನಲ್ಲಿ ಕನಿಷ್ಠ ಮೂಲ ಸೌಕರ್ಯವಿಲ್ಲದೆ ಜೀವನ ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *