ಆಗ್ರಾ: ಸ್ನಾನ ಮಾಡಲು ಯಮುನಾ ನದಿಗೆ ಇಳಿದ 6 ಬಾಲಕಿಯರು ನದಿಯಲ್ಲಿ ಕೊಚ್ಚಿ ಹೋದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ.
ಸಿಕಂದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ.
ಮೈದಾನದಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯರು ಬಿಸಿಲ ಬೇಗೆ ತಡೆಯಲು ಆಗದೇ ಸ್ನಾನ ಮಾಡಲು ನದಿಗೆ ಇಳಿದಿದ್ದಾರೆ. ಈ ವೇಳೆ ಸ್ನಾನ ಮಾಡುತ್ತಿದ್ದಾಗ ಮೊಬೈಲ್ ಫೋನ್ ನಲ್ಲಿ ರೀಲ್ಸ್ ಮಾಡಲು ಹೋದಾಗ ಈ ದುರಂತ ಸಂಭವಿಸಿದೆ.
ರೀಲ್ಸ್ ಮಾಡಲು ಪೈಪೋಟಿ ನಡೆಸಿದ ಬಾಲಕಿಯರು ಆಳವಾದ ಪ್ರದೇಶಕ್ಕೆ ಹೋಗಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ 6 ಮಂದಿ ಕೊಚ್ಚಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ನಾಲ್ವರು ಮುಳುಗಿದ್ದಾರೆ. ಆಗ ಇನ್ನಿಬ್ಬರು ಅವರನ್ನು ರಕ್ಷಿಸಲು ಹೋಗಿ ನದಿ ಸೆಳೆತಕ್ಕೆ ಸಿಲುಕಿದ್ದಾರೆ. ಸ್ಥಳೀಯರು ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೃತಪಟ್ಟ ಬಾಲಕಿಯರು ಒಂದೇ ಗ್ರಾಮದ ನಿವಾಸಿಗಳಾಗಿದ್ದು,ಮ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಮನೆಯ ಸಮೀಪವೇ ಕೆಲಸ ಮಾಡಿಕೊಂಡು ಇದ್ದರು. ಬಿಸಿಲು ಹೆಚ್ಚು ಇದ್ದಿದ್ದರಿಂದ ಸ್ನಾನ ಮಾಡಿ ತಂಪಾಗಲು ನದಿಗೆ ಇಳಿದಿದ್ದಾರೆ. ಈ ರೀತಿ ಆಗುತ್ತದೆ ಎಂದು ನಾವು ಊಹಿಸಿಯೇ ಇರಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.