Sunday, September 14, 2025
Menu

ಶಿಕ್ಷಣದಿಂದ ಮಾತ್ರ ಸ್ವತಂತ್ರ, ಸ್ವಾಭಿಮಾನಿ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಲು ಸಾಧ್ಯ

ಶಿಕ್ಷಣದಿಂದ ಮಾತ್ರ ನಮ್ಮ ಜ್ಞಾನದ ವಿಕಾಸವಾಗುತ್ತದೆ. ಅದರಿಂದ ನಾವು ಸ್ವತಂತ್ರ, ಸ್ವಾಭಿಮಾನಿ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಲು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಅವರು ಜೆಎಸ್‌ಎಸ್‌  ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಮೈಸೂರು ವತಿಯಿಂದ ಮೈಸೂರಿನ ವರುಣ ಕೆರೆಯ ಪಕ್ಕದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ನಗರದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಅನುಭವ ಮಂಟಪ ಹಾಗೂ ಸಂಘದ ಕಚೇರಿ  ಉದ್ಘಾಟಿಸಿ ಮಾತನಾಡಿದರು.

ಜೆಎಸ್ಎಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸೇರಿ ಗೃಹ ನಿರ್ಮಾಣ ಸಂಘವನ್ನು ಸ್ಥಾಪಿಸಿದ್ದಾರೆ. ಸಂಘದ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡುವ ಕೆಲಸವನ್ನು ಮಾಡಿದ್ದಾರೆ. ಸಂಘವು ಹಿಂದೆ ಜಮೀನು ಕೊಂಡ ದರದಲ್ಲಿಯೇ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಸಹಕಾರ ಸಂಘಗಳ ಇತಿಹಾಸದಲ್ಲಿಯೇ ಪ್ರಥಮ ಎಂದು ತಿಳಿಸಿದ ಮುಖ್ಯಮಂತ್ರಿಗಳು ಸಂಘದ ಸದಸ್ಯರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.

ಶಿವರಾತ್ರಿ ರಾಜೇಂದ್ರ ಮಠದ ಅಧ್ಯಕ್ಷರಾದ ನಂತರ ಸ್ವಾಮೀಜಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಕರ್ನಾಟಕ ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಠದಲ್ಲಿಯೂ ಶಿಕ್ಷಣ ಕ್ಷೇತ್ರಗಳನ್ನು ಸ್ಥಾಪಿಸಿದ್ದಾರೆ. ಇದಕ್ಕೆ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಹಾಕಿದ ಅಡಿಪಾಯವೇ ಕಾರಣ. ಶಿಕ್ಷಣ ಬಹಳ ಮುಖ್ಯ ಎಂದರು.

ಬಸವಣ್ಣನವರ ಕಾಲಕ್ಕಿಂತಲೂ ಹಿಂದೆ ಶೂದ್ರ ಜನಾಂಗದವರು ಮತ್ತು ಮಹಿಳೆಯರು, ಶಿಕ್ಷಣದಿಂದ ವಂಚಿತರಾಗಿದ್ದರು. ಮಹಿಳೆಯರಿಗೆ ಶಿಕ್ಷಣದ ಹಕ್ಕು ಸಿಕ್ಕಿದ್ದು ಬಸವಣ್ಣನವರ ಕಾಲದಲ್ಲಿ ಎನ್ನುವುದನ್ನು ನಾವು ಮರೆಯಬಾರದು. ಅನುಭವ ಮಂಟಪ ಎಂದು ಹೆಸರಿಟ್ಟಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.  ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಜನರ ಸಾಮಾಜಿಕ ಅನುಭವಗಳನ್ನು ಚರ್ಚೆ ಮಾಡಿ ಅದಕ್ಕೆ ರೂಪ ಕೊಡುವ ಕೆಲಸವನ್ನು ಮಾಡಿದ್ದರು ಎಂದು ಹೇಳಿದರು.

ಬಸವಣ್ಣನವರು ಯಾವುದೇ ಜಾತಿ, ಧರ್ಮ, ಪಂಗಡಕ್ಕೆ ಸೇರಿದವರಲ್ಲ. ಅವರು ವಿಶ್ವ ಮಾನವರಾಗಿದ್ದವರು. ಸಮಾಜ ಜಾತ್ಯತೀತ, ಅಸಮಾನತೆಯಿಂದ ಮುಕ್ತವಾಗಬೇಕೆಂಬ ಕನಸನ್ನು ಕಂಡಿ ದ್ದರು. ಸಮ ಸಮಾಜ ನಿರ್ಮಾಣದ ಕನಸನ್ನು ಕಂಡಿದ್ದಷ್ಟೇ ಅಲ್ಲದೇ ಅನುಭವ ಮಂಟಪದಲ್ಲಿ ಎಲ್ಲರಿಗೂ ಮುಕ್ತ ಅವಕಾಶಗಳನ್ನು ಒದಗಿಸಿದ್ದರು.  ಬಸವಣ್ಣನವರು 850 ವರ್ಷಗಳ ಹಿಂದೆಯೇ,  “ಇವನಾರವ ಇವನಾರವ ಎಂದೆಣಿಸದರಿ,  ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯಾ” ಎಂದು ಹೇಳಿದ್ದರು.  ಈಗಲೂ ವಿದ್ಯಾವಂತರಾದ ನಾವೂ ಸಹ ನೀವು ಯಾವ ಜಾತಿಗೆ ಸೇರಿದವರು ಎಂದು ಕೇಳುವುದು ಸಾಮಾನ್ಯವಾಗಿದೆ.  ಬಸವಾದಿ ಶರಣರು ಇದನ್ನು ಬಯಸಿರಲಿಲ್ಲ. ಜಾತಿ, ವರ್ಗಗಳ ನಿರ್ಮೂಲನೆಗೆ ಪಣ ತೊಟ್ಟು, ಎಲ್ಲರೂ ಮನುಷ್ಯರಾಗಿ ಬಾಳಬೇಕೆಂದು ಬಯಸಿದ್ದರು. ಅದಕ್ಕಾಗಿಯೇ ಅನುಭವ ಮಂಟಪ ಅಸ್ತಿತ್ವಕ್ಕೆ ಬಂದಿದ್ದು ಎಂದು ಹೇಳಿದರು.

ಇಂದು ಇಲ್ಲಿ ಉದ್ಘಾಟನೆಗೊಂಡಿರುವ ಈ ಮಂಟಪ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಕಾರಣವಾಗಲಿ ಎನ್ನುವ ಆಶಯ ವ್ಯಕ್ತಪಡಿಸಿದರು. ಪೂಜ್ಯ ರಾಜೇಂದ್ರ ಸ್ವಾಮೀಜಿಗಳು ಅಕ್ಷರ ದಾಸೋಹ, ಅನ್ನ ದಾಸೋಹಕ್ಕೆ ಹೆಸರಾದವರು. ದಾಸೋಹದ ಅರ್ಥ ‘ಉತ್ಪಾದಿಸುವುದು ಮತ್ತು ಹಂಚುವುದು’ ಎಂಬುದಾಗಿದೆ. ಅದು ಇಲ್ಲಿ ಅರ್ಥಪೂರ್ಣವಾಗಿ ಆಚರಣೆಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ, ಸಮಾಜದ ಎಲ್ಲರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾವಲಂಬನೆ ಬಂದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಅದು ನಿರರ್ಥಕ. ಸಮಾಜದಲ್ಲಿ ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ ನಿರ್ಮಾಣ ಆಗಿರುವುದು ಎಂದು ಹೇಳಿದರು.

ಸಮ ಸಮಾಜ ನಿರ್ಮಾಣ ಮಾಡಿ ಸಹಬಾಳ್ವೆ ರೂಢಿಸಿಕೊಳ್ಳಬೇಕು. ಬಸವಣ್ಣನವರು ಹೇಳಿದಂತೆ ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣ ಆಗಬೇಕು . ಎಲ್ಲರೂ ಮನುಷ್ಯರಾಗಿ ಬಾಳಬೇಕು. ಸಂವಿಧಾನದ ಆಶಯವೂ ಅದೇ- ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ. ಆದ್ದರಿಂದ ನಾವೆಲ್ಲರೂ ಸಮ ಸಮಾಜ ನಿರ್ಮಾಣ ಮಾಡಿ ಸಹಬಾಳ್ವೆ ರೂಢಿಸಿಕೊಳ್ಳಬೇಕು. ಇದನ್ನು ಅನುಭವ ಮಂಟಪ ಸಾಕಾರಗೊಳಿಸಲಿ ಎಂದರು.

Related Posts

Leave a Reply

Your email address will not be published. Required fields are marked *