ಬೆಂಗಳೂರಿನ ಕಾಟನ್ಪೇಟೆಯಲ್ಲಿ ಮನೆಗೆ ನುಗ್ಗಿ ಮಹಿಳೆಯ ಕೊಂದು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಪ್ರಕರಣದ ಆರೋಪಿಗಳಿಬ್ಬರು ಮೃತ ಮಹಿಳೆಯ ಸಂಬಂಧಿಗಳೇ ಆಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಬೀದರ್ನ ಮಹಿಳೆ ಲತಾ ಎಂಬ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪುರಂದರ ಮತ್ತು ಆತನ ಸ್ನೇಹಿತ ಶಿವಪ್ಪ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಬೀದರ್ ಜಿಲ್ಲೆಯವರಾದ ಪುರಂದರ ಮತ್ತು ಶಿವಪ್ಪ ಕೆಮಿಕಲ್ ಫಾರ್ಮಸ್ಯೂಟಿಕಲ್ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದರು. ಇಬ್ಬರೂ ಮದ್ಯವ್ಯಸನಿಗಳಾಗಿದ್ದು, ಕ್ರಿಕೆಟ್ ಬೆಟ್ಟಿಂಗ್, ಜೂಜು ಮತ್ತು ರೈಸ್ ಪುಲ್ಲಿಂಗ್ ದಂಧೆಯಲ್ಲಿ ಸಾಕಷ್ಟು ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದರು. ಈ ಸಾಲ ತೀರಿಸಲು ಲತಾ ಅವರನ್ನು ಕೊಂದು ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪುರಂದರ ಲತಾ ಅವರ ಹತ್ತಿರದ ಸಂಬಂಧಿ. ಆಗಾಗ ಲತಾ ಅವರ ಮನೆಗೆ ಬರುತ್ತಿದ್ದ. ಆತನಿಗೆ ಲತಾ ಅವರ ಕುಟುಂಬದ ಸಂಪೂರ್ಣ ಮಾಹಿತಿಯಿತ್ತು. ಕುಟುಂಬ ಸದಸ್ಯರೆಲ್ಲಾ ಹೊರ ಹೋದ ನಂತರ ಲತಾ ಒಬ್ಬರೇ ಮನೆಯಲ್ಲಿಇರುತ್ತಾರೆ ಎಂಬುದನ್ನು ತಿಳಿದಿದ್ದ ಆತ ಅವರನ್ನು ಕೊಂದು ಹಣ, ಚಿನ್ನಾಭರಣ ದೋಚಲು ಸ್ನೇಹಿತ ಶಿವಪ್ಪನ ಜತೆ ಸೇರಿ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಮೇ 26ರಂದು ಕೆಎಸ್ಆರ್ಟಿಸಿ ಬಸ್ನಲ್ಲಿ ಬೀದರ್ನಿಂದ ಬೆಂಗಳೂರಿಗೆ ಬಂದು ಲತಾ ಅವರ ಮನೆಗೆ ಹೋಗಿದ್ದರು. ಪುರಂದರ ಸಂಬಂಧಿಕನಾದ ಕಾರಣ ಲತಾ ಬಾಗಿಲು ತೆರೆದು ಇಬ್ಬರಿಗೂ ತಿಂಡಿ ಕೊಟ್ಟು ಸತ್ಕರಿಸಿದ್ದರು. ಬಳಿಕ ಆರೋಪಿಗಳು ಲತಾ ಮೇಲೆರಗಿ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ 100 ಗ್ರಾಂ ಚಿನ್ನಾಭರಣ ಮತ್ತು 1.50 ನಗದು ದೋಚಿ ಪರಾರಿಯಾಗಿದ್ದರು.