Monday, September 08, 2025
Menu

ಗ್ರಾಮ ಸ್ವರಾಜ್ ಪರಿಕಲ್ಪನೆಯಡಿ ಮಹಾ ಪಂಚಾಯತ್ ಸಮ್ಮೇಳನ ನವೆಂಬರ್ 14ಕ್ಕೆ

ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯಡಿ ಮಹಾ ಪಂಚಾಯತ್ ಸಮ್ಮೇಳನವನ್ನು ನವೆಂಬರ್ 14ರಂದು ಆಯೋಜಿಸಲಾಗುವುದು. ಈ ಬೃಹತ್ ಸಮ್ಮೇಳನದಲ್ಲಿ ಭಾಗವಹಿಸಲು ಗ್ರಾಮ ಪಂಚಾಯತ್‌ಗಳ  ಮಾಜಿ ಹಾಗೂ ಹಾಲಿ ಸದಸ್ಯರನ್ನು ಆಹ್ವಾನಿಸಬೇಕು.  ಡಿಸೆಂಬರ್ ತಿಂಗಳಲ್ಲಿ ಪಂಚಾಯತ್ ರಾಜ್ ಕಾಯ್ದೆ ಮತ್ತು ಗ್ರಾಮ ಸ್ವರಾಜ್ ಕುರಿತಾಗಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗಾಂಧಿ ಭಾರತ ಶತಮಾನೋತ್ಸವʼ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಗಾಂಧಿ ಭಾರತ ಶತಮಾನೋತ್ಸವ ಅಂಗವಾಗಿ ಕಳೆದ ಡಿಸೆಂಬರ್ 26 ರಂದು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದ್ದು, ಡಿಸೆಂಬರ್ 26 2025 ರಂದು ಗಾಂಧಿ ಭಾರತ ಶತಮಾನೋತ್ಸವ ಕಾರ್ಯಕ್ರಮ ಸಮಾಪನಗೊಳ್ಳಲಿದೆ. ಈ ಅವಧಿಯಲ್ಲಿ ನಿರಂತರ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚನೆ ನೀಡಿದರು.

ಸಭೆಯ ಮುಖ್ಯಾಂಶಗಳು ಹೀಗಿವೆ,   ಗಾಂಧೀಜಿ ಅವರು ಭೇಟಿ ನೀಡಿರುವ ಸ್ಮರಣಾರ್ಥ ರಾಜ್ಯದ 120 ಸ್ಥಳಗಳಲ್ಲಿ ಸ್ತಂಭಗಳನ್ನು ನವೆಂಬರ್ ಕೊನೆಯ ಒಳಗಾಗಿ ನಿರ್ಮಿಸುವುದು.  ಗಾಂಧಿ ಭಾರತ ಅಂಗವಾಗಿ ರಾಜ್ಯಾದ್ಯಂತ ಜ್ಯೋತಿ ಯಾತ್ರೆಗಳನ್ನು ಆಯೋಜಿಸಲಾಗುವುದು. ಮಹಾತ್ಮಾ ಗಾಂಧೀಜಿ ಅವರ ಧ್ಯಾನಸ್ಥ ಭಂಗಿಯ ಭಾವಚಿತ್ರ ಹಾಗೂ ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾತಕಗಳನ್ನು ಎಲ್ಲಾ ಶಾಲೆಗಳಲ್ಲಿ ಬರೆದು ಅಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು.

ರಂಗಾಯಣದ ವತಿಯಿಂದ ಗಾಂಧಿ ವರ್ಸಸ್ ಗಾಂಧಿ, ಪಾಪು-ಬಾಪು ಹಾಗೂ ಮಹಾತ್ಮರ ಬರುವಿಗಾಗಿ ಎಂಬ ಮೂರು ನಾಟಕಗಳನ್ನು ನಿರ್ಮಿಸಿ ರಾಜ್ಯಾದ್ಯಂತ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗಿದೆ.  ರಾಜ್ಯದ 16 ಜಿಲ್ಲೆಗಳಲ್ಲಿ ಈಗಾಗಲೇ ಗಾಂಧಿ ಭವನ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ನಿವೇಶನ ಇನ್ನೂ ಸಿಗದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ನಿರಂತರವಾಗಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಬೇಕು.

ಸಚಿವರಾದ ಹೆಚ್.ಕೆ.ಪಾಟೀಲ್, ಪ್ರಿಯಾಂಕ ಖರ್ಗೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಆರ್.ವಿ.ದೇಶಪಾಂಡೆ, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಶತಮಾನೋತ್ಸವ ಸಮಿತಿಯ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *