ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನಲ್ಲಿ ಕಾರೊಂದು ಬಾವಿಗೆ ಉರುಳಿ ಬಿದ್ದು, ಮಕ್ಕಳು ಸೇರಿ ಒಂದೇ ಕುಟುಂಬದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ ತಡರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಮುಂದುವರಿದಿದೆ.
ದಿಂಡೋರಿ ತಾಲೂಕಿನ ಶಿವಾಜಿನಗರ ಪ್ರದೇಶದ ರಾಜ್ ಬ್ಯಾಂಕ್ವೆಟ್ ಹಾಲ್ನಲ್ಲಿ ಶುಕ್ರವಾರ ಸಂಜೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಭಾಗಿಯಾಗಿದ್ದರು. ರಾತ್ರಿ 10 ಗಂಟೆಗೆ ಕಾರ್ಯಕ್ರಮ ಮುಗಿದ ನಂತರ, ದಿಂಡೋರಿಯ ದರ್ಗೋಡ್ ಕುಟುಂಬವು ಕಾರಿನಲ್ಲಿ ಮನೆಗೆ ತೆರಳುವಾಗಬಾವಿಗೆ ಉರುಳಿದೆ.
ಮೃತರನ್ನು ರೇಷ್ಮಾ ಸುನಿಲ್ ದರ್ಗುಡೆ (27), ಆಶಾ ಅನಿಲ್ ದರ್ಗುಡೆ (32), ಖುಷಿ/ಶ್ರಿಷ್ಟಿ ಅನಿಲ್ ದರ್ಗುಡೆ (14), ಶ್ರೇಯಸ್ ಅನಿಲ್ ದರ್ಗುಡೆ (11), ರಾಖಿ/ಗುಣವಂತಿ ಸುನಿಲ್ ದರ್ಗುಡೆ, ಶ್ರಾವಣಿ ಅನಿಲ್ ದರ್ಗುಡೆ (11), ಸಮೃದ್ಧಿ ರಾಜೇಂದ್ರ ದರ್ಗುಡೆ (7), ಮಾಧುರಿ ಅನಿಲ್ ದರ್ಗುಡೆ (13) ಮತ್ತು ಸುನಿಲ್ ದತ್ತು ದರ್ಗುಡೆ (32) ಎಂದು ಗುರುತಿಸಲಾಗಿದೆ. ಇವರೆಲ್ಲ ದಿಂಡೋರಿ ತಾಲೂಕಿನ ಇಂದೋರ್ ನಿವಾಸಿಗಳು.
ಕಾರು ಚಾಲಕನ ನಿಯಂತ್ರಣ ಕಳೆದುಕೊಂಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಎನ್ಡಿಆರ್ಎಫ್ ತಂಡವೂ ಕಾರ್ಯಾಚರಣೆಯಲ್ಲಿ ತೊಡಗಿಒದೆ. ಸ್ಥಳದಲ್ಲಿ ಜನಸಂದಣಿ ಹೆಚ್ಚಾಗಿ ರಕ್ಷಣಾ ಕಾರ್ಯಗಳಿಗೆ ತೊಡಕಾಗಿದೆ. ಪೊಲೀಸರು ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ್ದಾರೆ.


