ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸಬ್ಸಿಡಿ ಸಹಿತ ಸಾಲ ಒಡಿಸುವುದಾಗಿ ನಂಬಿಸಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಒಂದು ಕೋಟಿ ರೂ. ವಂಚಿಸಿರುವ ಪ್ರಕರಣ ದಾವಣಗೆರೆಯಲ್ಲಿ ನಡೆದಿರುವುದು ಬಯಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ ಮಾಡಿದ ರಂಜಿತಾ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತ ಮಹಿಳೆಯರು ಪೊಲೀಸರ ಮೊರೆ ಹೋಗಿದ್ದರೂ ಕಾನೂನು ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಸಂತ್ರಸ್ತರು ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಚನ್ನಗಿರಿ ತಾಲೂಕಿನ ಸೋಮಲಾಪುರದ ನಿವಾಸಿ ರಂಜಿತಾ ವಾಲ್ಮೀಕಿ ನಿಗಮದ ಹೆಸರಿನಲ್ಲಿ ಶೆಟ್ಟಿಗೊಂಡನಹಳ್ಳಿ, ಬಸಾಪುರ, ಚನ್ನಗಿರಿ ಸೇರಿದಂತೆ ಹಲವು ಹಳ್ಳಿಗಳ ಮಹಿಳಾ ಸಂಘಗಳನ್ನು ನಂಬಿಸಿ 5 ಲಕ್ಷ, 10 ಲಕ್ಷ, 20 ಲಕ್ಷದವರೆಗೂ ಸಬ್ಸಿಡಿ ಸಾಲ ಕೊಡಿಸುತ್ತೇನೆ ಎಂದು ಭರವಸೆ ನೀಡಿ ಮಹಿಳೆಯರಿಂದ 50 ಸಾವಿರದಿಂದ 4 ಲಕ್ಷದವರೆಗೂ ನಗದು ನಗದು ಪಡೆದು ವಂಚಿಸಿದ್ದಾಳೆ ಎನ್ನಲಾಗಿದೆ. ರಂಜಿತಾ ಮಹಿಳೆಯರಿಂದ ಹಣ ಪಡೆಯುತ್ತಿರುವ ವೀಡಿಯೊಗಳನ್ನು ಸಂತ್ರಸ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆಲವರು ಮನೆಯಲ್ಲಿದ್ದ ಚಿನ್ನಾಭರಣವನ್ನೇ ಅಡವಿಟ್ಟು ಹಣ ಕೊಟ್ಟಿದ್ದೇವೆ ಎಂದು ಕಣ್ಣೀರಿಡುತ್ತಿದ್ದಾರೆ. ವಂಚನೆಯ ಒಟ್ಟು ಮೊತ್ತ ಸುಮಾರು 1 ಕೋಟಿ ಮೀರಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ಸಾಲ ಸೋಲ ಮಾಡಿ ನಾವು ಹಣ ನೀಡಿದ್ದೇವೆ. ಹಣ ಕೇಳಿದರೆ, ನೀವು ಕೊಟ್ಟಿರುವುದಕ್ಕೆ ಸಾಕ್ಷಿ ಕೊಡಿ ಎನ್ನುತ್ತಿದ್ದಾರೆ ಎಂದು ಸಂತ್ರಸ್ತೆಯರು ತಿಳಿಸಿದ್ದಾರೆ.