ಹಾಸನದಿಂದ ಚಿಕ್ಕಮಗಳೂರಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಬಂದಿದ್ದ ಮಹಿಳೆ ಕಣ್ಮರೆಯಾಗಿರುವ ಪ್ರಕರಣ ಬೇಲೂರು ತಾಲೂಕಿನ ಕಲ್ಕೆರೆ ಬಳಿ ನಡೆದಿದೆ. ಸ್ಥಳದಲ್ಲಿ ಆಕೆಯ ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿರುವುದು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಅನುಮಾನ ಸೃಷ್ಟಿಸಿದೆ. ಈ ಪ್ರಕರಣದಲ್ಲಿ ಪೊಲೀಸರ ವಿಳಂಬ ಧೋರಣೆ ಮಹಿಳೆಯ ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ತುಮಕೂರಿನ ಕುಣಿಗಲ್ ಮೂಲದ ಪ್ರಿಯಾಂಕ (29) ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಬಂದಿದ್ದರು. ಫೆಬ್ರವರಿ 12 ರಂದು ರಾತ್ರಿ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕ ತಮಗೆ ಯಾರೋ ಪರಿಚಯದವರು ಸಿಕ್ಕಿರುವುದಾಗಿ ತಿಳಿಸಿದ್ದರು. ಆ ಮಾತು ಮುಗಿಯುತ್ತಿದ್ದಂತೆ ಫೋನ್ ಕಟ್ ಆಗಿತ್ತು, ನಂತರ ಮಹಿಳೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆಕೆ ಬೇಲೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಪ್ರಿಯಾಂಕ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿದ್ದರು, ಒಡವೆಗಾಗಿ ದುಷ್ಕರ್ಮಿಗಳು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಪ್ರಿಯಾಂಕ ನಾಪತ್ತೆಯಾದ ತಕ್ಷಣ ಕುಟುಂಬ ಸದಸ್ಯರು ಅರೆಹಳ್ಳಿ ಹಾಗೂ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಲು ಅಲೆದಾಡಿದ್ದಾರೆ. ಪೊಲೀಸರು ತಕ್ಷಣ ಸ್ಪಂದಿಸಲಿಲ್ಲ ಎಂಬ ದೂರು ಕೇಳಿಬಂದಿದೆ. ಕುಟುಂಬಸ್ಥರು ಹೇಳುವ ಪ್ರಕಾರ, ಪೊಲೀಸರು ದೂರು ಪಡೆದು ತಕ್ಷಣ ತನಿಖೆ ಆರಂಭಿಸಿದ್ದರೆ ಪ್ರಿಯಾಂಕ ಬದುಕುತ್ತಿದ್ದರೇನೋ ಎಂದು ಸಂಬಂಧಿಕರುಆಕ್ರೋಶ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್ ಹಾಗೂ ಫಿಂಗರ್ಪ್ರಿಂಟ್ ತಜ್ಞರ ತಂಡ ಧಾವಿಸಿದೆ.
ಆಕೆ ಕಾಣೆಯಾದ ದಿನ ಕುಟುಂಬ ಸದಸ್ಯರು ಹುಡುಕಾಟ ನಡೆಸಿದಾಗ ಸ್ಥಳದಲ್ಲಿ ಯಾವುದೇ ಬಟ್ಟೆಗಳು ಇರಲಿಲ್ಲ. ಬೆಳಿಗ್ಗೆ ನೋಡಿದಾಗ ಕಲ್ಕೆರೆ ಬಳಿ ಮಹಿಳೆಯ ಒಳ ಉಡುಪು, ಬ್ಯಾಗ್ ಹಾಗೂ ಚಪ್ಪಲಿಗಳು ಪತ್ತೆಯಾಗಿವೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ, ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.


