ಬೆಂಗಳೂರು ಬ್ಯಾಟರಾಯನಪುರ ಸಂಚಾರಿ ಪೊಲೀಸ್ ವ್ಯಾಪ್ತಿಯಲ್ಲಿ ನೈಸ್ ರಸ್ತೆ ಪ್ರವೇಶಿಸುವ ಬಳಿ ಬೈಕ್ ಗೆ ಸಿಮೆಂಟ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ರೇಣುಕಾ ಎಂಬವರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಬಸವೇಶ್ವರ ನಗರ ಬಿಡಿಎ ನಿವಾಸಿ ರೇಣುಕಾ(52) ಮೃತಪಟ್ಟವರು. ಅವರು ಮಗಳು ಹಾಗೂ ಮೊಮ್ಮಗನ ಜೊತೆ ಬೈಕ್ನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ದುರಂತ ನಡೆದಿದೆ.
ಬಂಡೆ ಮಹಾಕಾಳಿ ದೇಗುಲಕ್ಕೆ ತೆರಳುವಾಗ ವೀರಭದ್ರ ನಗರ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಮೂವರೂ ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ರೇಣುಕಾ ಅವರ ಮೇಲೆ ಲಾರಿ ಹರಿದಿದೆ. ಕುಸುಮಾ, ಮೋಕ್ಷಿತ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.