ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ವಿಪರೀತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ.
ಮಂಗಳೂರಿನ ಉಳ್ಳಾಲದ ಮೊಂಟೆಪದವು ಬಳಿ ಗುಡ್ಡ ಕುಸಿದು ಎರಡು ಮನೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮನೆಯೊಳಗಿದ್ದ 6ಕ್ಕೂ ಹೆಚ್ಚು ಮಂದಿ ಕುಸಿದ ಗೋಡೆಯಡಿ ಸಿಲುಕಿದ್ದು, ಸ್ಥಳೀಯರು, ಎನ್ಡಿಆರ್ಎಫ್ ಸೇರಿದಂತೆ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನಿಬ್ಬರು ಅವಶೇಷಗಳಡಿ ಜೀವಂತವಾಗಿರುವುದು ಪತ್ತೆಯಾಗಿದೆ. ಅವರನ್ನು ರಕ್ಷಿಸಲು ರಕ್ಷಣಾ ತಂಡಗಳು ಹರಸಹಾಸ ಮಾಡುತ್ತಿದೆ. ಅವಶೇಷಗಳಡಿ ಸಿಲುಕಿರುವ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ನಿರಂತರ ಮಳೆ ಕಾರ್ಯಾಚರಣೆಗೂ ಅಡ್ಡಿಯಾಗಿದೆ.
ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಕುಸಿದಿದ್ದು, ಮೃತ ಮಹಿಳೆಯನ್ನು ಕಾಂತಪ್ಪ ಪೂಜಾರಿ ಪತ್ನಿ ಪ್ರೇಮ ಪೂಜಾರಿ ಎಂದು ಗುರುತಿಸಲಾಗಿದೆ. ಕಾಂತಪ್ಪ ಪೂಜಾರಿ ಹಾಗೂ ಸೀತಾರಾಮ ಅವರನ್ನು ರಕ್ಷಿಸಲಾಗಿದೆ. ಅಶ್ವಿನಿ(33) ಹಾಗೂ ಮಕ್ಕಳಾದ ಆರ್ಯನ್(3) ಹಾಗೂ ಆರುಷ್(2) ರಕ್ಷಣೆಗೆ ಕಾರ್ಯಾ ಚರಣೆ ತೀವ್ರಗೊಂಡಿದೆ. ದೇರಳಕಟ್ಟೆ ಕಾನಕೆರೆಯ ಗುಡ್ಡ ಕುಸಿತದಲ್ಲಿ ಮಗು ಮೃತಪಟ್ಟಿದೆ. 6 ವರ್ಷದ ಮಗುವನ್ನು ರಕ್ಷಣಾ ತಂಡ ಕಾರ್ಯಚರಣೆ ಹೊರತೆಗೆದಿದೆ. ಪಾತಿಮಾ ನಯೀಮ ಎಂಬ ಮಗು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದೆ.
ನಿರಂತರ ಮಳೆ ಸುರಿಯುತ್ತಿರುವುದರಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಮನೆ, ಅಂಗಡಿ ಸೇರಿದಂತೆ ಹಲವು ಕಟ್ಟಡಗಳಿಗೆ ನೀರು ನುಗ್ಗಿದೆ. ಮಂಗಳೂರು ನಗರದ ರಸ್ತೆಗಳು ಕರೆಯಂತಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.