ಬೆಂಗಳೂರಿನ ಸಂಜಯನಗರ ವ್ಯಾಪ್ತಿಯಲ್ಲಿ ವೈದ್ಯರೊಬ್ಬರಲ್ಲಿ ಮಹಿಳೆಯು ಅತ್ತೆಯನ್ನು ಕೊಲ್ಲಲು ಮಾತ್ರೆ ಕೇಳಿರುವುದು ವರದಿಯಾಗಿದೆ. ಮಹಿಳೆಯು, ನನ್ನ ಅತ್ತೆಯನ್ನು ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಕೇಳಿದ್ದಕ್ಕೆ ವೈದ್ಯರೂ ಒಂದು ಕ್ಷಣ ಶಾಕ್ ಆಗಿದ್ದಾರೆ.
ಡಾಕ್ಟರ್ ಸುನೀಲ್ ಕುಮಾರ್ ಎನ್ನುವವರನ್ನು ಮಹಿಳೆಯೊಬ್ಬರು ವಾಟ್ಸಾಪ್ನಲ್ಲಿ ಸಂಪರ್ಕಿಸಿದ್ದಾರೆ. ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು, ಒಂದೆರೆಡು ಮಾತ್ರೆ ತೆಗೆದುಕೊಂಡರೆ ಸಾಯುತ್ತಾರಲ್ಲ, ಅದನ್ನು ಹೇಳಿ ಎಂದು ಮೆಸೇಜ್ ಮೂಲಕ ಕೇಳಿದ್ದಾರೆ.
ಇದನ್ನು ಕೇಳಿದ ಡಾಕ್ಟರ್ ಸಂಜಯ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿಮಾತು ಹೇಳಿದ್ದಾರೆ. ಬುದ್ಧಿ ಹೇಳುತ್ತಿದ್ದಂತೆ, ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್ನ ಬ್ಲಾಕ್ ಮಾಡಿದ್ದಾರೆ.
ಮುಂಚೆಯೇ ಸ್ಕ್ರೀನ್ಶಾಟ್ ಪಡೆದಿದ್ದ ವೈದ್ಯ ಸುನೀಲ್ ಕುಮಾರ್ ಸಂಜಯ್ ನಗರ ಪೊಲೀಸರಿಗೆ ಮಾಹಿತಿ ನೀಡಿ, ತನಿಖೆ ಮಾಡಿ ಎಂದು ಮನವಿ ಮಾಡಿದ್ದಾರೆ. ಸದ್ಯ ಮಹಿಳೆಯ ಫೋನ್ ಸ್ವಿಚ್ಡ್ಆಫ್ ಆಗಿದ್ದು, ಪೊಲೀಸರು ಪತ್ತೆ ಹಚ್ಚಿದ ಬಳಿಕ ನಿಜ ಏನೆಂಬುದು ಬಯಲಾಗಲಿದೆ.