ನವದೆಹಲಿ: ಭಾರತ ಬಯಸಿದರೆ ಪಾಕಿಸ್ತಾನವನ್ನು ನಾಲ್ಕು ಭಾಗಗಳಾಗಿ ವಿಂಗಡಿಸುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸ್ವದೇಶೀ ನಿರ್ಮಿತ ಐಎನ್ ಎಸ್ ವಿಕ್ರಾಂತ್ ಗೆ ಶುಕ್ರವಾರ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ್ ನಲ್ಲಿ ನೌಕಾಪಡೆ ಕೂಡ ಇತರೆ ಪಡೆಗಳ ಜೊತೆ ಕೈ ಜೋಡಿಸಿತ್ತು. ನೌಕಾಪಡೆ ಕೂಡ ಸಾಕಷ್ಟು ಬಲಿಷ್ಠವಾಗಿದ್ದು, ಯಾವುದೇ ಸಂದರ್ಭ ಎದುರಿಸಲು ಸಿದ್ಧವಾಗಿದೆ ಎಂದರು.
1971ರಲ್ಲಿ ಭಾರತೀಯ ನೌಕಾಪಡೆ ಯುದ್ಧಕ್ಕೆ ಪ್ರವೇಶಿಸಿದರೆ ಏನಾಗುತ್ತದೆ ಎಂದು ತೋರಿಸಿಕೊಟ್ಟಿದ್ದೇವೆ. ಆಗ ಪಾಕಿಸ್ತಾನವನ್ನು ಇಬ್ಭಾಗ ಮಾಡಲಾಗಿತ್ತು. ಆದರೆ ಈಗ ನಾಲ್ಕು ಭಾಗ ಮಾಡುವಷ್ಟು ಸಮರ್ಥವಾಗಿದೆ ಎಂದರು.
ಐಎನ್ ಎಸ್ ವಿಕ್ರಾಂತ್ ಪ್ರಸ್ತುತ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಭಾರತೀಯ ನೌಕಾಪಡೆ ಸದ್ದಿಲ್ಲದೇ ತನ್ನ ಕೆಲಸ ಮಾಡುತ್ತಿದೆ. ಸಮುದ್ರ ಮಾರ್ಗವಾಗಿ ಪಾಕಿಸ್ತಾನ ಯಾವುದೇ ದುಸ್ಸಾಹಕ್ಕೆ ಕೈಹಾಕಿದರೆ ಅದನ್ನು ಮೆಟ್ಟಿ ನಿಲ್ಲುವಷ್ಟು ಸಮರ್ಥವಾಗಿದೆ. ಇಂತಹ ಹಲವು ಪ್ರಯತ್ನಗಳನ್ನು ಭಾರತ ಈಗಾಗಲೇ ಹಿಮ್ಮೆಟ್ಟಿಸಿದೆ ಎಂದು ಅವರು ಹೇಳಿದರು.