ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಕರಗುಂದ ಬಳಿ ಮಹಿಳೆಯೊಬ್ಬಳು ಪ್ರೀತಿಸಿ ಮದುವೆಯಾದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರುವುದು ಬಹಿರಂಗಗೊಂಡಿದೆ.
ಎನ್ಆರ್ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯ ಜಾಡು ಹಿಡಿದ ಪೊಲೀಸರಿಗೆ ಸ್ಫೋಟಕ ತಿರುವು ಸಿಕ್ಕಿದ್ದು, ಪತ್ನಿಯೇ ಪತಿಯನ್ನು ಕೊಲೆ ಮಾಡಿಸಿರುವುದು ಬಯಲಾಗಿದೆ. ಹತ್ಯೆಯಾದ ವ್ಯಕ್ತಿ ಎನ್ಆರ್ಪುರ ಪಟ್ಟಣದ ಸುದರ್ಶನ್. ಪತ್ನಿ ಕಮಲ ಮತ್ತು ಆಕೆಯ ಪ್ರಿಯಕರ ಎಸ್.ಶಿವರಾಜ್ ಹಾಗೂ ಆತನ ಇನ್ನಿಬ್ಬರು ಸ್ನೇಹಿತತರು ಸೇರಿ ಕೊಲೆ ಮಾಡಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕಡುಹಿನಬೈಲು ಗ್ರಾಮದ ಕರುಗುಂದ ಬಸ್ ನಿಲ್ದಾಣದ ಸಮೀಪ ಸುದರ್ಶನ್ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತ್ನಿ ಕಮಲ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎರಡು ತನಿಖಾ ತಂಡ ರಚಿಸಿದ್ದರು. ತನಿಖೆ ವೇಳೆ ಕಮಲ ಕೊಲೆ ಮಾಡಿಸಿರುವುದು ದೃಢಪಟ್ಟಿದೆ.
ಆರೋಪಿ ಹತ್ತು ವರ್ಷದ ಹಿಂದೆ ಸುದರ್ಶನ್ ಜೊತೆ ಮದುವೆಯಾಗಿದ್ದಳು. ಬಳಿಕ ಆಕೆ ಶಿವರಾಜ್ ಎಂಬವನೊಂದಿಗೆ ಸಂಬಂಧ ಹೊಂದಿದ್ದಳು. ಇದಕ್ಕೆ ಪತಿ ಸುದರ್ಶನ್ ಅಡ್ಡಿಯಾಗುತ್ತಾನೆಂದು ಶಿವರಾಜ್ ಜೊತೆ ಸೇರಿ ಸಂಚು ರೂಪಿಸಿ ಕೊಲೆ ಮಾಡಿಸಿದ್ದಳು. ಹತ್ಯೆಗೂ ಮೊದಲು ಮದ್ಯದಲ್ಲಿ ನಿದ್ರೆ ಮಾತ್ರೆಯನ್ನು ಸೇರಿಸಿ ಕುಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿ, ಬಳಿಕ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.