Wednesday, February 04, 2026
Menu

ಬಿಜೆಪಿ ಸರ್ಕಾರದ ಅಕ್ರಮದಲ್ಲಿ ಯಾರು ರಾಜೀನಾಮೆ ಕೊಟ್ಟಿದ್ದರು, ಮನರೇಗಾ ಚರ್ಚೆ ನಡೆಯದಂತೆ ಡ್ರಾಮಾ: ಡಿಕೆ ಶಿವಕುಮಾರ್

ಬಿಜೆಪಿ ಕಾಲದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿತ್ತು. ಆಗ ಅವರ ಸರ್ಕಾರದಲ್ಲಿ ಯಾರು ರಾಜೀನಾಮೆ ಕೊಟ್ಟಿದ್ದರು? ದಲಿತ ಸಚಿವನಿಗೆ ತೊಂದರೆ ನೀಡಲು ಬಿಜೆಪಿ ನಾಯಕರು ಈ ರೀತಿ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್  ಕಿಡಿಕಾರಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.  ಬಿಜೆಪಿ ನಾಯಕರು ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎಂದು ಕೇಳಿದಾಗ, “ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನೆಲ್ಲಾ ಭ್ರಷ್ಟಾಚಾರ ಆಗಿದೆ ಎಂದು ಸಚಿವರಾದ ತಿಮ್ಮಾಪುರ ಅವರು ತಿಳಿಸಿದ್ದಾರೆ. ಬಿಜೆಪಿ ಅವರು ಮಾಡುತ್ತಿರುವ ಆರೋಪಕ್ಕೆ ಸಾಕ್ಷಿ ಇಲ್ಲ. ಎಲ್ಲವೂ ಸುಳ್ಳು ಆರೋಪಗಳು. ವಿರೋಧ ಪಕ್ಷಗಳು ತಾವು ಬದುಕಿದ್ದೇವೆ ಎಂದು ತೋರಿಸಲು ಮುಂದಾಗಿದ್ದಾರೆ ಎಂದರು.

ಮನರೇಗಾ ಯೋಜನೆ ಬಗ್ಗೆ ಚರ್ಚೆ ಮಾಡುವುದು ಬೇಕಾಗಿಲ್ಲ. ಹೀಗಾಗಿ ಅವರು ಡ್ರಾಮಾ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ತಮ್ಮ ಸರ್ಕಾರ ಜಾರಿಗೆ ತಂದಿರುವ ನೂತನ ಕಾಯ್ದೆ ಬಗ್ಗೆ ಚರ್ಚೆ ಮಾಡಲಿ. ಅವರಿಗೆ ಅದರ ಬಗ್ಗೆ ಚರ್ಚೆ ಮಾಡಲು ಯಾವುದೇ ಅಂಶವಿಲ್ಲ ಎಂದು ಈ ರೀತಿ ಮಾಡುತ್ತಿದ್ದಾರೆ. ಇದು ವಿಷಯಾಂತರ ಮಾಡುವ ಪ್ರಯತ್ನ ಎಂದು ತಿರುಗೇಟು ನೀಡಿದರು.

ಮನರೇಗಾ ಯೋಜನೆಯಿಂದ ಆಗಿರುವ ಅನುಕೂಲದ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂಬುದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಮನರೇಗಾ ಕಾಯ್ದೆಯಲ್ಲಿ ಪ್ರತಿ ಪಂಚಾಯ್ತಿಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕೆಲಸ ನಿರ್ಧಾರ ಮಾಡಬಹು ದಾಗಿತ್ತು. ಬಿಜೆಪಿ ವಿಬಿ ಗ್ರಾಮ್ ಜಿ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಈ ಯೋಜನೆಯಿಂದ ಪ್ರತಿ ಹಳ್ಳಿಯಲ್ಲಿ ಎಷ್ಟು ದನದ ಕೊಟ್ಟಿಗೆ ಕಟ್ಟಿಸಬಹುದು, ಎಷ್ಟು ರೈತರ ಜಮೀನು ಮಟ್ಟ ಮಾಡಿಸಬಹುದು ಎಂದು ಬಿಜೆಪಿ ನಾಯಕರು ಹೇಳಲಿ ಎಂದು ಸವಾಲೆಸೆದರು.

ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಈ ಕಾಯ್ದೆ ಜಾರಿ ಅಸಾಧ್ಯ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾವು ಇಟ್ಟುಕೊಂಡು ಕೂತಿದ್ದೇವೆ. ಈ ಬಗ್ಗೆ ಅವರು ಚರ್ಚೆ ಮಾಡಲಿ, ನಾವು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *