Menu

ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ: ಏನೇನು ನಿರ್ಬಂಧ

ಆಷಾಢ ಶುಕ್ರವಾರ, ಶನಿವಾರ, ಭಾನುವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರಿಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ದಿನಗಳಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಶುಕ್ರವಾರದಂದು ಬೆಟ್ಟಕ್ಕೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಬೇಕಿದೆ. ಲಲಿತ ಮಹಲ್ ಆವರಣದಿಂದ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಶನಿವಾರ, ಭಾನುವಾರ ಬಸ್ ಶುಲ್ಕ ಅನ್ವಯವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲಾಡಳಿತ ಧರ್ಮದರ್ಶನದ ಜೊತೆಗೆ 300 ರೂಪಾಯಿ ಹಾಗೂ 2000 ರೂ ಟಿಕೆಟ್ ದರ್ಶನ ನಿಗದಿಪಡಿಸಿದೆ. ಲಲಿತ್ ಮಹಲ್ ಆವರಣದಲ್ಲೇ ಟಿಕೆಟ್ ನೀಡಲಾಗುವುದು. 2000 ರೂ ದರ್ಶನ ಟಿಕೆಟ್ ಪಡೆದವರಿಗೆ ಎಸಿ ಬಸ್ ನಲ್ಲಿ ಉಚಿತ ಪ್ರಯಾಣದೊಂದಿಗೆ ನೇರ ದರ್ಶನವಿರಲಿದೆ. ಆಷಾಢ ಶುಕ್ರವಾದಲ್ಲಿ ವಿವಿಐಪಿ ಗಳಿಗೆ ಬೆಳಿಗ್ಗೆ 5 ರಿಂದ 10 ಗಂಟೆಗೆ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ ಎಂದು ಎಂದು ಸುದ್ದಿಗೋಷ್ಠಿಯಲ್ಲಿ ಡಿಸಿ ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಮೊಬೈಲ್ ಬಳಕೆ ನಿಷೇಧಿಸಿದ್ದು, ಬಳಸಿದರೆ ಮೊಬೈಲ್, ಕ್ಯಾಮೆರಾ ಎಲ್ಲವನ್ನೂ ಶಾಶ್ವತವಾಗಿ ವಶಕ್ಕೆ ಪಡೆಯಲಾಗುತ್ತದೆ. ಉತ್ಸವ ಮೂರ್ತಿಯ ಪೋಟೋ, ವೀಡಿಯೊ ಚಿತ್ರೀಕರಿಸಿ ಪ್ರಾಧಿಕಾರವೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಿದೆ.

ಭಕ್ತರಿಗೆ ಕುಂಕುಮ ಪ್ರಸಾದ, ಮುತ್ತೈದೆಯರಿಗೆ ಮಡಿಲಕ್ಕಿ ಪ್ಯಾಕೆಟ್ ವಿತರಿಸಲಾಗುವುದು. ಪ್ರಾಧಿಕಾರದಿಂದ ವಿಶೇಷ ಗಿಫ್ಟ್ ಬಾಕ್ಸ್ ಮಾರಾಟವಿರುತ್ತದೆ. ಗಿಫ್ಟ್ ಬಾಕ್ಸ್​​ನಲ್ಲಿ ಚಾಮುಂಡೇಶ್ವರಿ ವಿಗ್ರಹ, ಮೈಸೂರು ರಾಜ ಲಾಂಛನ, ಅಂಬಾರಿ ಹೊತ್ತ ಆನೆ ವಿಗ್ರಹ, ಕೈಗೆ ಕಟ್ಟುವ ದಾರ , ಶ್ರೀಚಕ್ರವಿರುವ ಮರದ ಬಾಕ್ಸ್ ಇರಲಿದೆ. ಪ್ಲಾಸ್ಟಿಕ್ ನಿಷೇಧ ಹಿನ್ನಲೆ ಗಾಜಿನ‌ ಬಾಟಲಿನಲ್ಲಿ ನೀರು ಮಾರಾಟವಿರುತ್ತದೆ.

ಪೊಲೀಸ್ ಇಲಾಖೆ ಬೆಟ್ಟಕ್ಕೆ ಬಿಗಿ ಭದ್ರತೆ ನೀಡಲಿದೆ. ಸಾವಿರಾರು ಅತ್ಯಾಧುನಿಕ ಸಿಸಿ ಕ್ಯಾಮರಾ ಕಣ್ಗಾವಲು ಇರಲಿದೆ. ಅಹಿತಕರ ಘಟನೆ ನಡೆಯದಂತೆ ಸಾವಿರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಡಿಸಿ ಲಕ್ಷ್ಮೀಕಾಂತ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *