ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಆಡಳಿತಾರೂಢ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ನೀಡಲಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಇದು ಎನ್ಡಿಎ ಮಿತ್ರಪಕ್ಷಗಳ ಸರ್ವಾನುಮತದ ನಿರ್ಧಾರವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವರು ಹೇಳಿದರು. ಸಂಸತ್ತಿನ ಆವರಣದಲ್ಲಿ ನಡೆದ ಪ್ರಮುಖ ಬಿಜೆಪಿ ನಾಯಕರು ಮತ್ತು ಅವರ ಮಿತ್ರಪಕ್ಷಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ, ಜೆ.ಪಿ. ನಡ್ಡಾ, ಜೆಡಿಯು ಪಕ್ಷದ ಲಾಲನ್ ಸಿಂಗ್, ಶಿವಸೇನೆಯ ಶ್ರೀಕಾಂತ್ ಶಿಂಧೆ, ಟಿಡಿಪಿಯ ಲಾವೂ ಶ್ರೀಕೃಷ್ಣ ದೇವರಾಯಲು, ಮತ್ತು ಎಲ್ಜೆಪಿ (ರಾಮ್ ವಿಲಾಸ್) ಪಕ್ಷದ ಚಿರಾಗ್ ಪಾಸ್ವಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು. ರಾಜನಾಥ್ ಸಿಂಗ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಅಧಿಸೂಚನೆ ಪ್ರಕಟ: ಇದೇ ವೇಳೆ, ಭಾರತದ ಚುನಾವಣಾ ಆಯೋಗವು ಇಂದು ಪ್ರಕಟಿಸಿದ ವಿಶೇಷ ಭಾರತದ ಗೆಜೆಟ್ ಮೂಲಕ 2025ರ ಉಪರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿಯನ್ನು ಅಧಿಸೂಚಿಸಿದೆ. ಅಗತ್ಯವಿದ್ದರೆ, ಸೆಪ್ಟೆಂಬರ್ 9, 2025 ರಂದು ಮತದಾನ ನಡೆಯಲಿದೆ.