“ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಅಡಿ ಸ್ವಾಧೀನಕ್ಕೊಳಪಡುವ ಭೂಮಿಗಳಿಗೆ ದರ ನಿಗದಿಯನ್ನು ಇಂದು ನಡೆಯುವ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಭೂಸ್ವಾಧೀನ ಪರಿಹಾರ ವಿಚಾರವನ್ನೇ ವಿವಾದ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಮುಂದೆ ತೀರ್ಮಾನ ಮಾಡಲಿರುವ ಸೂಚಿತ ಪರಿಹಾರಕ್ಕೆ ಸರ್ವ ಪಕ್ಷಗಳೂ ಒಪ್ಪಿಗೆ ಸೂಚಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ” ಎಂದರು.
ದರ ನಿಗದಿ ಎಂದು ಅಂತಿಮವಾಗಬಹುದು ಹಾಗೂ ಕಾನೂನಾತ್ಮಕ ತೊಡಕುಗಳ ನಿವಾರಣೆಯ ಕ್ರಮದ ಬಗ್ಗೆ ಎಂದು ಕೇಳಿದಾಗ, “ಈ ವಿಚಾರ ತುಂಬಾ ತಡವಾಗಬಾರದು ಎಂದು ನಾನು ತೀರ್ಮಾನ ತೆಗೆದುಕೊಂಡಿರುವೆ. ಸಚಿವ ಸಂಪುಟದಲ್ಲಿ ಇದರ ಬಗ್ಗೆ ತೀರ್ಮಾನ ಮಾಡಲಾಗುವುದು. ನಾನು ಅಫಿಡವಿಟ್ ಗೆ ಸಹಿ ಹಾಕಿದ್ದು ಎಸಿಎಸ್ ಅವರು ಗುರುವಾರ ನ್ಯಾಯಲಯಕ್ಕೆ ಇದನ್ನು ಸಲ್ಲಿಸಲಿದ್ದಾರೆ” ಎಂದು ಹೇಳಿದರು.
“ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀ. ಹೆಚ್ಚಳ ಮಾಡಿದರೆ ಎಷ್ಟು ಭೂಮಿ ಬೇಕಾಗಬಹುದು ಎಂದು ಮುಖ್ಯಮಂತ್ರಿಯವರು ಹಾಗೂ ನಾನು ಸಂಬಂಧಪಟ್ಟವರಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಇದರ ಬಗ್ಗೆ ಕಾನೂನು ತಜ್ಞರ ಬಳಿ ಚರ್ಚೆ ನಡೆಸಲಾಗುತ್ತಿದೆ. ಇದರ ಬಗ್ಗೆ ಕಾನೂನು ತಂಡ ಗುರುವಾರ ಬೆಳಿಗ್ಗೆ ಅಭಿಪ್ರಾಯ ನೀಡಲಿದ್ದು, ಇದನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು” ಎಂದು ತಿಳಿಸಿದರು.