ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಬೆಂಗಳೂರು ಪೊಲೀಸರು ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ಬಂಧನಕ್ಕೆಂದು ಬಿಹಾರಕ್ಕೆ ಹೋದ ಪೊಲೀಸರೇ ಈ ಸೈಬರ್ ಖದೀಮರ ಜಾಲ ನೋಡಿ ಬೆಚ್ಚಿ ಬಿದ್ದಿದ್ದಾರೆ. ಊರಿನ 20ರಿಂದ 25 ವಯಸ್ಸಿನ 150 ಯುವಕರು ಸೈಬರ್ ಅಪರಾಧದಲ್ಲಿ ತೊಡಗಿರುವ ವಿಚಾರ ಬಹಿರಂಗಗೊಂಡಿದೆ. ಆರೋಪಿ ವಿಕಾಸ್ನನ್ನು ಕಸ್ಟಡಿಗೆ ಪಡೆದ ಸದಾಶಿವ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸೆ.15ರಂದು ಉಪೇಂದ್ರ ದಂಪತಿಯ ಮೊಬೈಲ್ ಹ್ಯಾಕ್ ಆಗಿತ್ತು. ಆನ್ಲೈನ್ನಲ್ಲಿ ಕೆಲವು ವಸ್ತುಗಳನ್ನು ಪ್ರಿಯಾಂಕಾ ಬುಕ್ ಮಾಡಿದ್ದರು. ಆಗ ಮೊಬೈಲ್ಗೆ ಲಿಂಕ್ ಬಂದಿದ್ದು, ಆ ಲಿಂಕ್ ಅನ್ನು ಪ್ರಿಯಾಂಕ ಕ್ಲಿಕ್ ಮಾಡಿದ್ದರು. ಬಳಿಕ ವಾಟ್ಸಾಪ್ ಹ್ಯಾಕ್ ಮಾಡಿದ್ದ ಆರೋಪಿಯು ಅವರ ಸಂಪರ್ಕದಲ್ಲಿದ್ದವರಿಗೆ 55 ಸಾವಿರ ಹಣ ಕಳುಹಿಸುವಂತೆ ಮೆಸೇಜ್ ಮಾಡಿದ್ದ. ಈ ವೇಳೆ ಆರೋಪಿ ಯಾರೆಂದು ತಿಳಿಯಲು ಯತ್ನಿಸಿರುವ ಪ್ರಿಯಾಂಕಾ, ಪತಿ ಉಪೇಂದ್ರ ಹಾಗೂ ಮ್ಯಾನೇಜರ್ ನಂಬರ್ನಿಂದ ಕರೆ ಮಾಡಿದ್ದರು. ಬಳಿಕ ಮ್ಯಾನೇಜರ್ ಹಾಗೂ ಉಪೇಂದ್ರ ಮೊಬೈಲ್ ಕೂಡ ಹ್ಯಾಕ್ ಆಗಿತ್ತು.
ಹಣ ಅಗತ್ಯವಿದೆ ಎಂದು ಪ್ರಿಯಾಂಕ ಅವರ ವಾಟ್ಸ್ಯಾಪ್ನಿಂದ ಆರೋಪಿ ಹಲವರಿಗೆ ಮೆಸೇಜ್ ಮಾಡಿದ್ದು, ಪ್ರಿಯಾಂಕಾ ಅವರೇ ಸಂದೇಶ ಕಳುಹಿಸಿದ್ದು ಎಂದು ಕೆಲವರು ಹಣ ಹಾಕಿದ್ದಾರೆ. ಉಪೇಂದ್ರ ಪುತ್ರ ಕೂಡ ತಾಯಿ ಅಕೌಂಟ್ಗೆ ಐವತ್ತು ಸಾವಿರ ಹಾಕಿದ್ದರು. ಕೆಲವರು ಅನುಮಾನಗೊಂಡು ಪ್ರಿಯಾಂಕಾ ಅವರ ನಂಬರ್ಗೆ ಕರೆ ಮಾಡಿದರೆ ಕಾಲ್ ಕಟ್ ಆಗುತ್ತಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಸದಾಶಿವನಗರ ಠಾಣೆಗೆ ಈ ಬಗ್ಗೆ ಪ್ರಿಯಾಂಕಾ ದೂರು ನೀಡಿದ್ದರು. ಸೈಬರ್ ವಂಚಕನ ಅಕೌಂಟ್ಗೆ ಒಂದೂವರೆ ಲಕ್ಷ ರೂಪಾಯಿ ಹಣ ವರ್ಗಾವಣೆ ಆಗಿತ್ತು.


