ಕಾಂಗ್ರೆಸ್ಸಿನವರು ಕೇವಲ ಹಿಂದೂ ವಿರೋಧಿಯಲ್ಲ; ದಲಿತ ವಿರೋಧಿ ಕೂಡ ಎಂದು ಜನರಿಗೆ ಭೀಮ ಹೆಜ್ಜೆ ಕಾರ್ಯ ಕ್ರಮದ ವೇಳೆ ತಿಳಿಸುತ್ತೇವೆ ಎಂಬುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಭೀಮ ಹೆಜ್ಜೆ 100ರ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯು ಸಂದರ್ಭದಲ್ಲಿ ಅವರು ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಡಾ. ಅಂಬೇಡ್ಕರ್ ಅವರು ನಿಪ್ಪಾಣಿಗೆ ಬಂದು 100 ವರ್ಷಗಳಾದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಜನ್ಮದಿನವೂ ಬರುತ್ತಿರುವ ಸಂದರ್ಭದಲ್ಲಿ 100 ವರ್ಷದ ನೆನಪನ್ನು ಭೀಮ ಹೆಜ್ಜೆ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾ ಗುತ್ತಿದೆ ಎಂದು ವಿವರಿಸಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಯಾವ ಕಾರಣಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರೋ ಅದನ್ನು ಜನರಿಗೆ ನೆನಪಿಸಲಾಗುವುದು. ಕಾಂಗ್ರೆಸ್ ಪಕ್ಷವು ಅವರಿಗೆ ಅನ್ಯಾಯ ಮಾಡಿದ್ದರು. ಅವರು ಸಂವಿಧಾನ ರಚನಾ ಸಭೆಯಲ್ಲಿ ಇರಬಾರದೆಂಬ ಕಾರಣಕ್ಕೆ ಹಿಂದೂ ಬಾಹುಳ್ಯದ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟ ಸಂಗತಿಯನ್ನು, ಎರಡೆರಡು ಬಾರಿ ಅವರನ್ನು ಸೋಲಿಸಿದ್ದು, ಮಧ್ಯಂತರ ಸರಕಾರಕ್ಕೆ ಬಾರದಂತೆ ತಡೆದುದನ್ನು ತಿಳಿಸುತ್ತೇವೆ ಎಂದರು. ದಲಿತರ ಮೀಸಲಾತಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ವಿರೋಧಿಸಿದ್ದನ್ನು ಜನರ ಮುಂದೆ ತೆರೆದಿಡುತ್ತೇವೆ. ಈಗಲೂ ಖರ್ಗೆಯವರಿಗೆ ಅವಮಾನ ಮಾಡಿದ್ದನ್ನೂ ತಿಳಿಸುತ್ತೇವೆ ಎಂದರು.
ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿ ಅಧಿವೇಶನದಲ್ಲಿ ನಮ್ಮ ಶಾಸಕಿ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಬಂದು 100 ವರ್ಷವಾಗುತ್ತಿದೆ ಎಂದು ಸರಕಾರದ ಗಮನ ಸೆಳೆದಿದ್ದಾರೆ. ಬೆಳಗಾವಿಗೆ ಮಹಾತ್ಮ ಗಾಂಧಿಯವರು ಬಂದ ಕಾರ್ಯಕ್ರಮ ಅವರು ಮಾಡಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪ ಇಲ್ಲ ಎಂದರು.ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭೇಟಿಯ 100 ವರ್ಷ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಸರಕಾರ ಈ ಕಾರ್ಯಕ್ರಮ ಮಾಡಿದ್ದರೆ ನಾವು ಮಾಡುತ್ತಿರಲಿಲ್ಲ. ಇದು ನಮ್ಮ ಬದ್ಧತೆ ಎಂದು ತಿಳಿಸಿದರು.