Thursday, January 08, 2026
Menu

ಬಿಜೆಪಿ ಕಾರ್ಯಕರ್ತೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸರು ಹೇಳಿದ್ದೇನು?

police shashidar

ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರು ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸುವಾಗ ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂಬ ಪ್ರಕರಣ ಟ್ವಿಸ್ಟ್ ಲಭಿಸಿದ್ದು, ತಾನೇ ಬಟ್ಟೆ ಬಿಚ್ಚಿಕೊಂಡು ನಮ್ಮ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯ ನೀಡಿದ ದೂರಿನ ಮೇರೆಗೆ ಬಂಧಿಸಲು ತೆರಳಿದ ಪೊಲೀಸರು ಪ್ರತಿರೋಧ ತೋರಿದ ಮಹಿಳೆಯ ಬಟ್ಟೆ ಬಿಚ್ಚಿ ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗಿತ್ತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು. ಬೂತ್‌ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ ನಮ್ಮ ವೋಟ್‌ ಡಿಲೀಟ್‌ ಮಾಡಿಸಿದ್ದಾರೆ ಅಂತ ಗಲಾಟೆ ಮಾಡಿದ್ದರು. ಹಾಗಾಗಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ತಿಕ್ಕಾಟ ನಡೆಯುತ್ತಲೇ ಇತ್ತು. ಇದೇ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರಂತೆ. ಇದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೂ ಪ್ರತಿದೂರು ದಾಖಲಾಗಿತ್ತು.

ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್‌ ಸೆಕ್ಷನ್‌ 307 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನ ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಆಕೆ ಪ್ರತಿರೋಧ ತೋರಿ ಚೀರಾಡಿದ್ದಾರೆ. ಅಷ್ಟಕ್ಕೇ ಪೊಲೀಸರು ಆಕೆಯನ್ನ ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಮಹಿಳೆಯನ್ನ ಥಳಿಸಿದ್ದು ಅಲ್ಲದೇ ಬಂಧನದ ವೇಳೆ ಅನುಚಿತ ವರ್ತನೆ ತೋರಿದ್ದಾರೆ ಎಂದು ಮತ್ತೊಂದು ದೂರು ದಾಖಲಿಸಿ ಜೈಲಿಗಟ್ಟಿದ್ದಾರೆ.

ತಾನೇ ಬಟ್ಟೆ ಬಿಚ್ಚಿ ಸೀನ್‌ ಕ್ರಿಯೇಟ್‌ ಮಾಡಿದ್ದಾಳೆ: ಪೊಲೀಸರ ಸ್ಪಷ್ಟನೆ

ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದಾಗ ಆಕೆ ವಿವಸ್ತ್ರಳಾಗಿರಲಿಲ್ಲ. ವ್ಯಾನ್‌ ಹತ್ತಿದ ಮೇಲೆ ತಾನೇ ಬಟ್ಟೆ ಬಿಚ್ಚಿ ಸೀನ್‌ ಕ್ರಿಯೇಟ್‌ ಮಾಡಿದ್ದಾಳೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

2020ರಿಂದ ಬಂಧಿತ ಮಹಿಳೆ ಮೇಲೆ 5 ಪ್ರಕರಣ ದಾಖಲಾಗಿದ್ದವು. ಅದರಲ್ಲಿ ಧಾರವಾಡ ವಿದ್ಯಾಗಿರಿಯಲ್ಲಿ ಒಂದು ಮತ್ತು ಇದೇ ಕೇಶ್ವಾಪುರ ಠಾಣೆಯಲ್ಲಿ 4 ಕೇಸ್‌ ದಾಖಲಾಗಿದ್ದವು. ಈ ವರ್ಷ 4 ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ ಎಂದು ಎಂದು ಅವರು ವಿವರಿಸಿದ್ದಾರೆ.

ಹಿಂದಿನ ಪ್ರಕರಣಗಳಲ್ಲಿ ಮಹಿಳೆಯ ನಡವಳಿಕೆಗಳ ಬಗ್ಗೆ ಮಾಹಿತಿ ಹೊಂದಿದ್ದ ಕೇಶ್ವಾಪುರ ಪೊಲೀಸರು ಮಹಿಳೆಯನ್ನ ಬಂಧಿಸಲು ಹೆಚ್ಚುವರಿ ಮಹಿಳಾ ಸಿಬ್ಬಂದಿ ಕರೆಸಿಕೊಂಡಿದ್ದಾರೆ. ಪೊಲೀಸರು ವಶಕ್ಕೆ ಪಡೆದು ಬಂಧಿಸುವಾಗ ಆಕೆ ಬೆತ್ತಲೆ ಆಗಿರಲಿಲ್ಲ, ವ್ಯಾನ್‌ ಹತ್ತಿದ ಬಳಿಕ ಬಟ್ಟೆ ಆಕೆಯೇ ಬಿಚ್ಚಿದ್ದಾಳೆ. ಮಹಿಳೆ ಹಾಗೂ ಪುರುಷ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಸ್ಪಷ್ಟನೆ ನೀಡಿದರು.

ಮತಪಟ್ಟಿ ಪರಿಷ್ಕರಣೆಗೆ ಹೋದಾಗ ಸ್ಥಳೀಯರ ನಡುವೆ ನಡೆದ ಸಂಘರ್ಷ ದ್ವೇಷದ ರೂಪಕ್ಕೆ ಬದಲಾಗಿದೆ, ಗಲಾಟೆಯೂ ನಡೆದಿದೆ. ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ನಂತರ ದೂರು ದಾಖಲಾಗುತ್ತಾ ಹೋಗಿವೆ. ಇದೇ ವೇಳೆ ಸ್ಥಳೀಯರಾದ ಪ್ರಶಾಂತ್‌ ಬೊಬ್ಬಾಜಿ ಅವರು ನೀಡಿದ ದೂರು ಆಧರಿಸಿ ಕೇಸ್‌ನ ಪ್ರಮುಖ ಆರೋಪಿಯಾಗಿದ್ದ ಮಹಿಳೆಯನ್ನ ಬಂಧಿಸಲಾಗಿದೆ. ಮಹಿಳೆಯೊಬ್ಬರಿಗೆ ಕತ್ತು ಹಿಸುಕಲು ಹೋಗಿದ್ದು, ಖಾಸಗಿ ಅಂಗಕ್ಕೆ ಹೊಡೆದಿದ್ದು, ಸಾಕ್ಷ್ಯ ಸಿಕ್ಕದ ಮೇಲೆ ಅರೆಸ್ಟ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಹಿಳೆಯನ್ನ ವ್ಯಾನ್‌ ಒಳಗೆ ಹತ್ತಿಸುತ್ತಿದ್ದಂತೆ ಆಕೆಯೇ ಖುದ್ದಾಗಿ ಬಟ್ಟೆಯನ್ನ ಬಿಚ್ಚಿದ್ದಾಳೆ. ಅಲ್ಲದೇ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ. ಕಲಾವತಿ ಚಂದಾವರ್ಕರ್‌, ಶಕುಂತಲಾ, ರೇಖಾ ಮತ್ತು ಮಾರ್ಗರೇಟ್‌ ಅನ್ನುವವರಿಗೆ ಕಚ್ಚಿ ಘಾಸಿಗೊಳಿಸಿದ್ದಾಳೆ. ಓರ್ವ ಸಿಬ್ಬಂದಿಗೆ ಹೊಟ್ಟೆ ಭಾಗಕ್ಕೆ ರಕ್ತ ಬರುವಂತೆ ಕಚ್ಚಿದ್ದಾಳೆ. ಆದ್ರೆ ಈ ವಿಡಿಯೋ ಯಾರ್‌ ಮಾಡಿದ್ದಾರೆ ಗೊತ್ತಿಲ್ಲ. ವಿಡಿಯೋ ಮಾಡಿ ವೈರಲ್‌ ಮಾಡಿದವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಪೊಲೀಸರು ಮಾಡಿದ್ದರೆ, ಅರೆಸ್ಟ್‌ ಆದ ಮೇಲೆ ಮೆಡಿಕಲ್‌ ಮಾಡಿಸ್ತೀವಿ, ಆಗಲಾದ್ರೂ ವೈದ್ಯರ ಬಳಿ ಹೇಳೋಕೆ ಅವಕಾಶ ಇತ್ತು. ನಂತರ ಮ್ಯಾಜಿಸ್ಟ್ರೇಟ್‌ ಬಳಿಯೂ ಹೇಳಿಲ್ಲ. ಆಕೆ ಬಟ್ಟೆ ಬಿಚ್ಚಿದ್ದಾಗ ಪೊಲೀಸರೇ ಸ್ಥಳೀಯರ ಸಹಾಯದಿಂದ ಬೇರೆ ಬಟ್ಟೆ ಹಾಕಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *