ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನ ತೈಲ ಚಲನೆ ವಿಭಾಗದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಓರ್ವ ಅಸ್ವಸ್ಥರಾಗಿರುವ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ (ಟ್ಯಾಂಕ್ FB7029 A – ಡ್ರೈ ಸ್ಲಾಪ್ ಸರ್ವಿಸ್, ಫ್ಲೋಟಿಂಗ್ ರೂಫ್) ಮೇಲ್ಭಾಗದ ಪ್ಲಾಟ್ಫಾರ್ಮ್ನಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ದೀಪ್ ಚಂದ್ರ ಭಾರತೀಯ ಮತ್ತು ಬಿಜಿಲ್ ಪ್ರಸಾದ್ ಮೃತಪಟ್ಟಿದ್ದು, ವಿನಾಯಕ ಮ್ಯಾಗೇರಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ.
ಇಬ್ಬರೂ ಕಾರ್ಮಿಕರು ತೊಟ್ಟಿಯ ಮೇಲ್ಭಾಗದ ಪ್ಲಾಟ್ಫಾರ್ಮ್ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ವಿವರವಾದ ತನಿಖೆ ನಡೆಸಲು ಗ್ರೂಪ್ ಜನರಲ್ ಮ್ಯಾನೇಜರ್ಗಳ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಜೊತೆಗೆ, ಎಲ್ಲ ಸಂಬಂಧಿತ ಕಾನೂನಾತ್ಮಕ ಪ್ರಾಧಿಕಾರಗಳಿಗೆ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದು ಎಂಆರ್ಪಿಎಲ್ನ ಚೀಫ್ ಜನರಲ್ ಮ್ಯಾನೇಜರ್ ಸಿಬಿ ಮತ್ತು ಸಿಸಿ ಡಾ. ರುಡಾಲ್ಫ್ ವಿಜೆ ನೊರೊನ್ಹಾ ತಿಳಿಸಿದ್ದಾರೆ.