ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ನ ಕೃಷ್ಣ ಕನ್ವೆನ್ಷನ್ ಸೆಂಟರ್ ಬಳಿ ಗಣಿ ಅಧಿಕಾರಿಗೆ ಹೆದರಿ ಓಡಿ ಹೋಗುವಾಗ ಕಾರಿಗೆ ಅಡ್ಡ ಸಿಕ್ಕಿ ಟಿಪ್ಪರ್ ಚಾಲಕ ಮೃತಪಟ್ಟಿರುವ ಘಟನೆಯೊಂದು ನಡೆದಿದೆ.
ರಾಯಚೂರು ಲಿಂಗಸೂರಿನ ರಮೇಶ್ (35) ಮೃತಪಟ್ಟಿರುವ ಚಾಲಕ. ಟಿಪ್ಪರ್ ಲಾರಿ ಚೇಸ್ ಮಾಡಿದ್ದ ಗಣಿ ಅಧಿಕಾರಿ ಸವಿತಾ ಅವರಿಗೆ ಹೆದರಿಕೊಂಡು ಟಿಪ್ಪರ್ ಚಾಲಕ ಹೆದ್ದಾರಿಯಲ್ಲಿ ಟಿಪ್ಪರ್ ಲಾರಿ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದ. ಓಡಿ ಹೋಗುವಾಗ ಕಾರಿಗೆ ಅಡ್ಡ ಸಿಕ್ಕಿದ್ದು, ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಗಣಿ ಅಧಿಕಾರಿಯ ವಾಹನವನ್ನು ಕಂಡು ನಡುರಸ್ತೆಯಲ್ಲೇ ಟಿಪ್ಪರ್ ಬಿಟ್ಟು ಚಾಲಕ ತಪ್ಪಿಸಿಕೊಳ್ಳುವ ಭರದಲ್ಲಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಟಿಪ್ಪರ್ ಲಾರಿ ಹಾಗೂ ಅಪಘಾತ ಮಾಡಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


