ಹುಣಸೂರು ತಾಲೂಕಿನ ನಾಗಪುರ ಗಿರಿಜನ ಹಾಡಿಯಲ್ಲಿ ಮೇಕೆ ಮೇಯಿಸಲು ಕುರುಚಲು ಅರಣ್ಯ ಪ್ರದೇಶಕ್ಕೆ ತೆರಳಿದ್ದ ಕುರಿಗಾಹಿ ಯುವಕನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಹರೀಶ್ (29) ಹುಲಿ ದಾಳಿಯಿಂದ ಮೃತಪಟ್ಟ ಯುವಕ. ಇತ್ತೀಚೆಗಷ್ಟೇ ಕೊಡಗಿನ ಬಾಳೆಲೆ ಗ್ರಾಮದ ಯುವತಿ ಜೊತೆಗೆ ಹರೀಶ್ಗೆ ವಿವಾಹವಾಗಿತ್ತು.
ಹುಲಿ ದಾಳಿಯ ಭೀತಿಯಿಂದಾಗಿ ಕುರುಚಲು ಅರಣ್ಯ ಪ್ರದೇಶಕ್ಕೆ ಯಾರೂ ಹೋಗುತ್ತಿರಲಿಲ್ಲ. ಯುವಕ ಮೇಕೆಗಳನ್ನು ಮೇಯಿಸಲು ಹೋದಾಗ ಹುಲಿ ಯುವಕನ ಮೇಲೆ ದಾಳಿ ಮಾಡಿದೆ, ಇದನ್ನು ಕಂಡು ಮೇಕೆಗಳು ದಿಕ್ಕೆಟ್ಟು ಓಡಿ ಹೋಗಿವೆ. ಗಮನಿಸಿದ ಸ್ಥಳೀಯರು ಘಟನಾ ಸ್ಥಳಕ್ಕೆ ಬಂದು ನೋಡಿದಾಗ ಹುಲಿ ದಾಳಿ ಮಾಡಿ ರುವುದು ಕಂಡು ಬಂದಿದೆ.
ಹರೀಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿದ ಶಾಸಕ ಜಿ.ಡಿ. ಹರೀಶ್ಗೌಡ ಆಸ್ಪತ್ರೆಗೆ ಭೇಟಿ ನೀಡಿ, ಸೂಕ್ತ ಪರಿಹಾರ ನೀಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಹರೀಶ್ ಕುಟುಂಬಕ್ಕೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು.