ಬೆಂಗಳೂರು: ಜೈಲಿನಿಂದ ಹೊರಗೆ ಬರುತ್ತಿದ್ದಂತೆ ತನ್ನ ಹಳೇ ಕಸುಬನ್ನು ಆರಂಭಿಸಿ ಮೊದಲ ಬಾರಿ ಕಳ್ಳತನ ಮಾಡಿದಾಗಲೇ ಕಳ್ಳ ಸಿಕ್ಕಿಬಿದ್ದಿದ್ದು, 52 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಎಸಗಿ ಜೈಲು ಪಾಲಾಗಿದ್ದ ಸರಗಳ್ಳ ಹೊರಬಂದ ನಂತರ ಕಳ್ಳತನಕ್ಕೆ ಇಳಿದಿದ್ದ ಅಚ್ಯುತ್ ಕುಮಾರ್ ಅಲಿಯಾಸ್ ಗಣಿ ನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 52.89 ಲಕ್ಷ ರೂ ಮೌಲ್ಯದ 541 ಗ್ರಾಂ ಚಿನ್ನಾಭರಣ, 1 ದ್ವಿಚಕ್ರ ವಾಹನವನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹಲವು ವರ್ಷಗಳಿಂದ ಸರಗಳ್ಳತನ ಮಾಡುತ್ತಿದ್ದ ಆರೋಪಿಯ ವಿರುದ್ಧ 100ಕ್ಕೂ ಅಧಿಕ ಪ್ರಕರಣಗಳಿದ್ದು, ಸಾಕಷ್ಟು ಬಾರಿ ಜೈಲು ಪಾಲಾಗಿದ್ದ. ಇತ್ತೀಚಿಗೆ ಜೈಲಿನಲ್ಲಿ ಪರಿಚಯವಾಗಿದ್ದ ಮತ್ತೋರ್ವ ಆರೋಪಿಯೊಂದಿಗೆ ಸೇರಿ ಮೊದಲ ಬಾರಿ ಮನೆಗಳ್ಳತನ ಮಾಡಿದ್ದ. ಬಳ್ಳಾರಿಯ ಮನೆಯೊಂದರಲ್ಲಿ ಅರ್ಧ ಕೆ. ಜಿ ಚಿನ್ನಾಭರಣ ದೋಚಿದ್ದ ಅಚ್ಯುತ್ ಕುಮಾರ್, ನಂತರ ಬೆಂಗಳೂರಿಗೆ ಬಂದು ಇಲ್ಲಿ ಸರಗಳ್ಳತನ ಮಾಡಿದ್ದ.
ದೋಚಿದ್ದ ಚಿನ್ನಾಭರಣಗಳನ್ನ ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಮಾರಾಟ ಮಾಡಿದ್ದ. ಮೂರೇ ತಾಸಿನ ಅವಧಿಯಲ್ಲಿ ಬೆಂಗಳೂರಿನ ಮೂರು ಠಾಣೆಗಳ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ದವನನ್ನ ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಮತ್ತೋರ್ವ ಸಹಚರ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ಮುಂದುವರೆದಿದೆ.
ಆರೋಪಿಯ ಬಂಧನದಿಂದ ಗಿರಿನಗರ, ಕೊಡಿಗೇಹಳ್ಳಿ, ಸಂಜಯನಗರ, ಯಲಹಂಕ ನ್ಯೂ ಟೌನ್, ಕೆಂಗೇರಿ, ಕೋಣನಕುಂಟೆ, ತಿಲಕ್ ನಗರ, ಬನಶಂಕರಿ, ಬೇಗೂರು, ಬ್ಯಾಟರಾಯನಪುರ ಠಾಣೆಗಳಲ್ಲಿ ತಲಾ ಒಂದೊಂದು ಸರಗಳ್ಳತನ ಪ್ರಕರಣಗಳು ಹಾಗೂ ಬಳ್ಳಾರಿಯ ಕೌಲ್ ಬಜಾರ್ ಠಾಣೆಯಲ್ಲಿ 1 ಮನೆಗಳವು ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.