ಕರ್ನಾಟಕದ ಬ್ಯಾಂಕ್ಗಳಲ್ಲಿ ಹತ್ತಕ್ಕೂ ಹೆಚ್ಚು ವರ್ಷಗಳಿಂದ 3,400 ಕೋಟಿ ರೂ. ಕ್ಲೇಮ್ ಆಗದೆ ಉಳಿದಿದೆ ಎಂದು ಆರ್ಬಿಐ ಬೆಂಗಳೂರು ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಜಿಲ್ಲಾ ಸಮಾಲೋಚನ ಸಮಿತಿ (ಡಿಸಿಸಿ) ಮತ್ತು ಜಿಲ್ಲಾ ಮಟ್ಟದ ಪರಾಮರ್ಶೆ ಸಮಿತಿ (ಡಿಎಲ್ಆರ್ಸಿ) ಸಭೆಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.
ಹತ್ತಕ್ಕೂ ಹೆಚ್ಚು ವರ್ಷಗಳಿಂದ ಬ್ಯಾಂಕ್ ಖಾತೆಗಳು, ಡೆಪಾಸಿಟ್ ಪ್ಲಾನ್ಗಳು ನಿಷ್ಕ್ರಿಯವಾಗಿದ್ದರೆ ಆರ್ಬಿಐನ ಠೇವಣಿದಾರ ಶಿಕ್ಷಣ ಮತ್ತು ಜಾಗೃತಿ ನಿಧಿ ವಿಶೇಷ ನಿಧಿಗೆ ವರ್ಗಾವಣೆ ಮಾಡಲಾಗು ತ್ತದೆ. ರಾಷ್ಟ್ರಾದ್ಯಂತ ಬ್ಯಾಂಕುಗಳ ನಿಷ್ಕ್ರಿಯ ಅಕೌಂಟ್ಗಳಿಂದ ಆರ್ಬಿಐನ ಡಿಇಎಎಫ್ ಫಂಡ್ಗೆ ಒಟ್ಟು 75,000 ಕೋಟಿ ರೂ. ವರ್ಗಾವಣೆಯಾಗಿದೆ ಎಂದು ತಿಳಿಸಿದ್ದಾರೆ. ಕ್ಲೇಮ್ ಆಗದ ಶೇ. 80ರಷ್ಟು ಅಕೌಂಟ್ಗಳಲ್ಲಿ ಇರುವ ಹಣ 10,000 ರೂ.ಗಿಂತ ಕಡಿಮೆ. ಮೊಬೈಲ್ ನಂಬರ್ ಅಪ್ಡೇಟ್ ಆಗದೇ ಇರುವುದು, ಕೆವೈಸಿ ಅಪ್ಡೇಟ್ ಆಗದಿರುವುದು, ಖಾತೆದಾರರು ಜೀವಂತ ಇಲ್ಲದಿ ರುವುದು ಇತ್ಯಾದಿ ಕಾರಣಕ್ಕೆ ಅಕೌಂಟ್ಗಳು ನಿಷ್ಕ್ರಿಯ ಆಗಿವೆ.
ಬ್ಯಾಂಕ್ಗಳಲ್ಲಿ ಕ್ಲೇಮ್ ಆಗದೆ ಉಳಿದಿರುವ ಹಣವನ್ನು ಖಾತೆದಾರರಿಗೆ ಅಥವಾ ವಾರಸುದಾರರಿಗೆ ತಲುಪಿಸಲು ಆರ್ಬಿಐ ಅಭಿಯಾನವನ್ನೇ ನಡೆಸಿದೆ. ‘ನಿಮ್ಮ ಹಣ ನಿಮ್ಮ ಹಕ್ಕು’ ಕೆಂಪೇನ್ ಡಿಸೆಂಬರ್ 31ರವರೆಗೂ ಇರಲಿದೆ. ಈ ಖಾತೆದಾರರನ್ನು ಗುರುತಿಸಿ ಜೀವಂತ ಇದ್ದರೆ ಖಾತೆ ಸಕ್ರಿಯಗೊಳಿಸುವ ಅಥವಾ ಹಣ ಮರಳಿಸುವ ಕೆಲಸ ಮಾಡಲಾಗುತ್ತಿದೆ. ಜೀವಂತ ಇಲ್ಲದಿದ್ದರೆ ವಾರಸುದಾರರಿಗೆ ಹಣ ಮರಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಅನ್ಕ್ಲೇಮ್ಡ್ ಡೆಪಾಸಿಟ್ಗಳು ಯಾವುವು ಎಂದು ವೀಕ್ಷಿಸಲು udgam.rbi.org.in/ ಪೋರ್ಟಲ್ ಇದೆ. ಖಾತೆದಾರ ಹೆಸರು, ಬ್ಯಾಂಕನ್ನು ಆಯ್ಕೆ ಮಾಡಿಕೊಂಡು, ಪ್ಯಾನ್ ಅಥವಾ ವೋಟರ್ ಐಡಿ, ಡಿಎಲ್, ಪಾಸ್ಪೋರ್ಟ್ ನಂಬರ್ನಿಂದ ಸರ್ಚ್ ಮಾಡಿ ಅನ್ಕ್ಲೇಮ್ಡ್ ಡೆಪಾಸಿಟ್ ಇದ್ದರೆ ಪತ್ತೆ ಮಾಡಬಹುದು. ಕ್ಲೇಮ್ ಆಗದೆ ಖಾತೆ ಇರುವುದು ಗೊತ್ತಾದರೆ ಖುದ್ದಾಗಿ ಆ ಬ್ಯಾಂಕ್ ಕಚೇರಿಗೆ ಹೋಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಿದರೆ ಹಣ ಪಡೆಯಬಹುದು.


