ಕಾರ್ಮೋಡ ಕವಿದಿತ್ತು ಮುತ್ತಿನ ಹನಿಗಳು ಉದರಿತು ತೂಗುವ ತೊಟ್ಟಿಲು ಕೈತಪ್ಪಿತು ನಾನ್ ಇದ್ದೇನಲೇ ಪರಾಕ್ ಎಂದು ಚಿತ್ರದುರ್ಗ ಚಿಲ್ಲೆಯ ಚನ್ನಗಿರಿ ತಾಲೂಕಿನ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ರಾಮಲಿಂಗೇಶ್ವರ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ಮಹಾಶಿವರಾತ್ರಿ ದಿನ ನಡೆದ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದ ರಾಮಲಿಂಗೇಶ್ವರ ಮುಳ್ಳು ಗದ್ದುಗೆ ಐತಿಹಾಸಿಕ ಜಾತ್ರೆಯಲ್ಲಿ ಗದ್ದುಗೆ ಏರಿ ಶ್ರೀ ರಾಮಲಿಂಗೇಶ್ವರ ಸ್ವಾಮೀಜಿ ಕಾರ್ಣಿಕ ನುಡಿದಿದ್ದಾರೆ.
ಮಹಾಶಿವರಾತ್ರಿ ಮಾರನೇ ದಿನ ನಡೆಯುವ ಜಾತ್ರೆಯಲ್ಲಿ ಸ್ವಾಮೀಜಿ ಮುಳ್ಳಿನ ಪಲ್ಲಕ್ಕಿ ಮೇಲೆ ಕೂತು ಕುಪ್ಪಳಿಸುತ್ತ ಸ್ವಾಮೀಜಿ ಮೆರವಣಿಗೆಯಲ್ಲಿ ಸಾಗಿದ ನಂತರ ಭವಿಷ್ಯ ನುಡಿಯುತ್ತಾರೆ. ಈ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.
ಭಕ್ತರ ಕಷ್ಟ ನನಗಿರಲಿ, ಜಗದ ಸುಖ ಶಾಂತಿ ಭಕ್ತರಿಗೆ ಇರಲಿ ಎಂಬ ಸಂಕೇತದ ಪ್ರತೀಕವಾಗಿ ಮುಳ್ಳು ಗದ್ದುಗೆ ಉತ್ಸವ ನಡೆಸಲಾಗುತ್ತದೆ. ಮುಳ್ಳು ಗದ್ದುಗೆ ಮೆರವಣಿಗೆ ನಂತರ ಸ್ವಾಮೀಜಿ ಕಾರ್ಣಿಕ ನುಡಿದಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದ್ದು, ಬೆಳೆ ಕೈತಪ್ಪುವ ಸಾಧ್ಯತೆ ಇದೆ. ಆದರೆ ನಾನು ನಿಮ್ಮನ್ನು ರಕ್ಷಿಸುತ್ತೇನೆ ಎಂದು ದೈವವಾಣಿ ನುಡಿದಿದೆ ಎಂದು ಸ್ವಾಮೀಜಿ ಭವಿಷ್ಯ ವಿಶ್ಲೇಷಿಸಲಾಗಿದೆ. ಸ್ವಾಮೀಜಿ ನುಡಿದ ಕಾರ್ಣಿಕ ಸತ್ಯವಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು.