ಕಡಿಮೆ ಬಡ್ಡಿಗೆ ಅಂದರೆ ಶೇ ೧ ರೂಪಾಯಿ ಬಡ್ಡಿಗೆ ಲೋನ್ ಕೊಡಿಸುವುದಾಗಿ ನಂಬಿಸಿ ಗ್ರಾಹಕರಿಂದ ಹಣ ವಂಚಿಸಿ ಪರಾರಿಯಾಗಿ ಯಾಮಾರಿಸುತ್ತಿದ್ದ ಲೇಡಿ ಗ್ಯಾಂಗ್ವೊಂದನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಗ್ಯಾಂಗ್ನ ಕಿಂಗ್ಪಿನ್ ಲೇಡಿಯನ್ನು ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಸುಬ್ಬಲಕ್ಷ್ಮಿ ಚಿಟ್ ಫಂಡ್ ಹೆಸರಿನಲ್ಲಿ 1 ರೂಪಾಯಿ ಬಡ್ಡಿಗೆ ಲೋನ್ ಕೊಡಿಸುವುದಾಗಿ ನಂಬಿಸಿದ್ದ ಲೇಡಿ ಗ್ಯಾಂಗ್ ಗ್ರಾಹಕರೊಬ್ಬರಿಂದ ಹಣ ಪಡೆದು ವಂಚನೆ ಎಸಗಿತ್ತು. ದೂರು ಪಡೆದು ಪ್ರಕರಣದ ತನಿಖೆಗಿಳಿದ ಪೊಲೀಸರು ಕಿಂಗ್ಪಿನ್ ಲೇಡಿಯನ್ನು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ. ವಿಚಾರಣೆ ಬಳಿಕ 15 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
1 ರೂ.ಪಾಯಿಗೆ ಲೋನ್ ಕೊಸುವುದಾಗಿ ಹೇಳುವ ಈ ಗ್ಯಾಂಗ್ ಗ್ರಾಹಕರಿಂದ ಲೋನ್ ಪ್ರೊಸೆಸಿಂಗ್ಗೆ 30 ರೂ. ಪಡೆದುಕೊಂಡಿತ್ತು. ಕಿಂಗ್ ಪಿನ್ ನಯನಾ ನಮ್ಮ ಸಂಬಂಧಿ ಸುಬ್ಬಲಕ್ಷ್ಮಿ ಚಿಟ್ ಫಂಡ್ನಲ್ಲಿ ಕೆಲಸ ಮಾಡುತ್ತಿದ್ದಾರೆ, 10 ಲಕ್ಷ ಲೋನ್ ಕೊಡಿಸುತ್ತಾರೆ ಅದೂ 1 ರೂಪಾಯಿ ಬಡ್ಡಿಗೆ ಎಂದು ಹೇಳಿದ್ದಾಳೆ. ಲೋನ್ ಮಂಜೂರಾಗಬೇಕಾದರೆ ಮೊದಲೇ 3 ಇಎಂಐ ಕಟ್ಟಬೇಕು. ತಿಂಗಳಿಗೆ 10 ಸಾವಿರದಂತೆ 30 ಸಾವಿರ ರೂ. ಇಎಂಐ, ಜೊತೆಗೆ ಪ್ರೊಸೆಸಿಂಗ್ ಶುಲ್ಕ 5 ಸಾವಿರ ರೂ. ಕಟ್ಟಬೇಕು ಎಂದಿದ್ದಾಳೆ. ಬಳಿಕ ಎಲ್ಲರಿಗೂ ಒಟ್ಟಿಗೆ ಲೋನ್ ರಿಲೀಸ್ ಮಾಡುವುದಾಗಿ ಹೇಳಿ ಪರಾರಿಯಾಗಿದ್ದಾಳೆ.
ನಯನಾ ಗೌಡ ಜೊತೆ ಕವನಾ, ಗಿರೀಜಾ ಎಂಬ ಮಹಿಳೆಯರೂ ಸೇರಿಕೊಂಡಿದ್ದಾರೆ. ಗ್ರಾಹಕರಿಂದ ಹಣ ಕಟ್ಟಿಸಿಕೊಂಡ ಬಳಿಕ ಲೋನ್ ಕೊಡಿಸದೆ ಹಣವನ್ನೂ ವಾಪಸ್ ಕೊಡದೆ ವಂಚಿಸಿದ್ದಾರೆ. ಈ ಕುರಿತು ಸಂತ್ರಸ್ತರು ಬಸವೇಶ್ವರನಗರ, ಕೆ.ಪಿ. ಅಗ್ರಹಾರ, ಶ್ರೀರಾಮ್ ಪುರ, ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತನಿಖೆ ಬಳಿಕ ಗ್ಯಾಂಗ್ ಕಿಂಗ್ ಪಿನ್ ನಯನಾಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲಿಗೆಳೆದಿದ್ದಾರೆ. ವಿಚಾರಣೆ ವೇಳೆ ನಯನಾ ಹಲವರ ಹೆಸರು ಬಾಯ್ಬಿಟ್ಟಿದ್ದು, ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 15 ಜನರ ಮೇಲೆ ಕೇಸ್ ದಾಖಲಾಗಿದೆ.