Menu

ಸರಕಾರ ತಕ್ಷಣ ರಾಜೀನಾಮೆ ಕೊಡಲಿ: ಶೋಭಾ ಕರಂದ್ಲಾಜೆ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟು, 42 ಮಂದಿ ಗಾಯಗೊಂಡಿರುವ ದುರಂತಕ್ಕೆ ಸಂಬಂಧಿಸಿದಂತೆ ಈ ರಾಜ್ಯ ಸರಕಾರ ತಕ್ಷಣ ರಾಜೀನಾಮೆ ಕೊಡಬೇಕು ಎಂಬುದಾಗಿ  ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್‌ಸಿಬಿ ಗೆಲುವಿನ ವಿಜಯೋತ್ಸವವು ಕ್ರಿಮಿನಲ್ ಕ್ರಮ ಎಂದು  ಆಕ್ಷೇಪಿಸಿದ್ದು,  ಇದೊಂದು ಕೊಲೆಗಡುಕ ಸರಕಾರ ಎಂದು ಟೀಕಿಸಿದರು.

ಗುಜರಾತಿನ ಸ್ಟೇಡಿಯಂನಲ್ಲಿ ನರೇಂದ್ರ ಮೋದಿಜೀ ಅವರ ಕಾರ್ಯಕ್ರಮಕ್ಕೆ 5 ಲಕ್ಷ ಜನರು ಸೇರಿದ್ದರು. ಏನೂ ಆಗಲಿಲ್ಲ,  ಕರ್ನಾಟಕದಲ್ಲೂ ಇಂಥ ದೊಡ್ಡ ಕಾರ್ಯಕ್ರಮಗಳಾಗಿದ್ದರೂ ಆಗ ಏನೂ ಆಗಿರಲಿಲ್ಲ ಎಂದು ಗಮನ ಸೆಳೆದರು.

ಅಲ್ಲು ಅರ್ಜುನ್ ಅವರ ಚಲನಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಒಬ್ಬರು ಮೃತಪಟ್ಟಾಗ ಅಲ್ಲಿನ ಸರಕಾರ ಅಲ್ಲು ಅರ್ಜುನ್ ಅವರನ್ನು ಮನೆಯಿಂದ ಎಳೆದುಕೊಂಡು ಬಂದಿತ್ತು. ನೀವು ಯಾರನ್ನು ಎಳೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸಿದರು. ಉಪ ಮುಖ್ಯಮಂತ್ರಿಗಳು ಕಪ್ ಎತ್ತಿಕೊಂಡು ಚುಂಬಿಸಿಕೊಂಡು ಓಡಾಡುವ ಅಗತ್ಯ ಏನಿತ್ತು ಎಂದು ಕೇಳಿದರು.

ಬೆಂಗಳೂರಿನ ಡಿ.ಸಿ. ಎಂದರೆ ಅವರು ಬೆಂಗಳೂರಿನ ಇನ್ ಚಾರ್ಜ್ ಅಧಿಕಾರಿ. ಅವರಿಂದ ಯಾವುದೇ ತನಿಖೆ ಮಾಡಲು ಆಗದು. ಇದೊಂದು ಮೋಸದ ಕ್ರಮ ಎಂದು ಆಕ್ಷೇಪಿಸಿದರು. ಹೈಕೋರ್ಟಿನ ಕಾರ್ಯನಿರತ ಜಡ್ಜ್ ಮೂಲಕ ದುರ್ಘಟನೆಯ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಜನರ ಪ್ರಾಣಕ್ಕೆ ಯಾರು ರಕ್ಷಕರಿದ್ದರು ಎಂದ ಅವರು, ಆನ್‍ಲೈನ್ ಪಾಸ್ ನೀಡಿ ಬಳಿಕ ಅವನ್ನು ರದ್ದು ಮಾಡಿದ್ದರು. ಚಿನ್ನಸ್ವಾಮಿ ಸ್ಟೇಡಿಯಂ ಗೇಟನ್ನು ಮೊದಲೇ ತೆರೆದಿದ್ದರೆ ಇವರ್ಯಾರೂ ಸಾಯುತ್ತಿರಲಿಲ್ಲ ಎಂದು ತಿಳಿಸಿದರು. ಸಚಿವರ ಮಕ್ಕಳ ಒತ್ತಡಕ್ಕೆ ಈ ವಿಜಯೋತ್ಸವ ಆಚರಿಸಲಾಯಿತೇ ಎಂದು ಅವರು ಕೇಳಿದರು.

Related Posts

Leave a Reply

Your email address will not be published. Required fields are marked *