ಶ್ರೀನಗರ: ಪಹಲ್ಗಾವ್ ನಲ್ಲಿ 26 ಪ್ರವಾಸಿಗರನ್ನು ಹತ್ಯೆಗೈಯ್ಯುವ ಮುನ್ನ ಉಗ್ರರು ಇನ್ನೂ ಮೂರು ಸ್ಥಳಗಳನ್ನು ಗುರುತಿಸಿದ್ದರು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಉಗ್ರರಿಗೆ ಸಂಪರ್ಕದಲ್ಲಿದ್ದ ತಳಮಟ್ಟದ ಕಾರ್ಯಕರ್ತನೊಬ್ಬನನ್ನು ವಿಚಾರಣೆಗೊಳಪಡಿಸಿರುವ ಭಾರತೀಯ ಹಲವು ಸ್ಫೋಟಕ ವಿಷಯಗಳನ್ನು ಬಾಯಿಬಿಡಿಸಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಗಾವ್ ಗೆ ಏಪ್ರಿಲ್ 15ರಂದು ಪ್ರವೇಶಿಸಿದ್ದ ಉಗ್ರರು ಬೈಸರನ್ ಕಣಿವೆ ಪ್ರದೇಶದಲ್ಲಿ ಎರಡು ದಿನ ತಂಗಿದ್ದರು. ಅಲ್ಲದೇ ಪಹಲ್ಗಾವ್ ಅಲ್ಲದೇ ಅರು ಕಣಿವೆ, ಸ್ಥಳೀಯ ಅಮ್ಯೂಸ್ ಮೆಂಟ್ ಪಾರ್ಕ್, ಬೇತಾಬ್ ಕಣಿವೆಗಳಲ್ಲಿ ದಾಳಿಗೆ ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.
ಅರು ಕಣಿವೆ, ಅಮ್ಯೂಸ್ ಮೆಂಟ್ ಪಾರ್ಕ್ ಮತ್ತು ಬೇತಾಬ್ ಕಣಿವೆಗಳಲ್ಲಿ ಭಾರೀ ಪ್ರಮಾಣದಲ್ಲಿ ಭದ್ರತಾ ವ್ಯವಸ್ಥೆ ಇದ್ದಿದ್ದರಿಂದ ಉಗ್ರರು ಪಹಲ್ಗಾವ್ ನಲ್ಲಿ ದಾಳಿ ನಡೆಸಲು ಕೊನೆಯದಾಗಿ ನಿರ್ಧರಿಸಿದ್ದರು ಎಂದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ತನಿಖಾ ದಳ ತನಿಖೆಯನ್ನು ಚುರುಕುಗೊಳಿಸಿದ್ದು, ಜಮ್ಮು ಕಾಶ್ಮೀರದಲ್ಲಿ ತಂಗಿರುವ ಉಗ್ರರ ಸಂಪರ್ಕದಲ್ಲಿದ್ದಾರೆ ಎಂದು ಶಂಕಿಸಲಾಗಿರುವ ಸುಮಾರು 20 ತಳಮಟ್ಟದ ಕಾರ್ಯಕರ್ತರು ಹಾಗೂ ಮಾಹಿತಿದಾರರನ್ನು ವಿಚಾರಣೆಗೊಳಪಡಿಸಿದ್ದಾರೆ. ದಾಳಿಯ ಹಿಂದೆ ಮಾಹಿತಿದಾರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎನ್ ಐಎ ಶಂಕಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದೆ.
ದಾಳಿಗೂ ಮುನ್ನ ಮೂರು ಸ್ಯಾಟಲೈಟ್ ಫೋನ್ ಗಳನ್ನು ಬಳಸಲಾಗಿದ್ದು, ಎರಡು ಜಾಗಗಳ ಗುರುತು ಪತ್ತೆಹಚ್ಚುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಘಟನೆಗೆ ಸಂಬಂಧಿಸಿ ಇದುವರೆಗೆ 2500ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಲಾಗಿದ್ದು, 186 ಮಂದಿ ಇನ್ನು ಭದ್ರತಾ ಸಿಬ್ಬಂದಿಯ ವಶದಲ್ಲಿದ್ದಾರೆ.
ಕುಪ್ವಾರ, ಅನಂತ್ ನಾಗ್, ಟ್ರಾಲ್, ಪುಲ್ವಾಮಾ, ಸಪೊರೆ, ಬಾರಾಮುಲ್ಲಾ ಮತ್ತು ಬಂಡಿಪೊರದಲ್ಲಿರುವ ನಿಷೇಧಿತ ಸಂಘಟನೆಗಳಾದ ಹುರಿಯತ್ ಕಾನ್ಫರೆನ್ಸ್, ಜಮಾತ್ ಇ-ಇಸ್ಲಾಮ್ ಸಂಘಟನೆಗಳ ಕಚೇರಿಗಳ ಮೇಲೆ ಹಾಗೂ ಕಾರ್ಯಕರ್ತರನ್ನು ಕೇಂದ್ರೀಕರಿಸಿ ಕೆಲವು ಕಡೆ ದಾಳಿಗಳನ್ನು ಕೂಡ ಮಾಡಲಾಗಿದೆ.